ಮಡಿಕೇರಿ, ಮಾ. 31: ಕೇರಳದ ಮುಖ್ಯ ಕಲಾಪ್ರಕಾರಗಳಲ್ಲೊಂದಾಗಿ, ದೇಶದ ಹೆಸರಾಂತ ಸಮರಕಲೆಯಾಗಿ ಗುರುತಿಸಲ್ಪಟ್ಟಿರುವ ಕಡಲತೀರದ ಕಲರಿಪಯಟ್ ನೃತ್ಯಗಳ ಮೈನವಿರೇಳಿಸುವ ಪ್ರದರ್ಶನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳದ ಸಾಂಸ್ಕøತಿಕ ಸಂಜೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು.
ಗುರುಕುಲ ಶಿಕ್ಷಣ ಪದ್ಧತಿಯಾಗಿ ಕೇರಳದಲ್ಲಿ ಪ್ರಚಲಿತದಲ್ಲಿರುವ ಕಲರಿಪಯಟ್, ಶಸ್ತ್ರಾಸ್ತಗಳೊಂದಿಗೆ ಆತ್ಮರಕ್ಷಣೆಗೆ ಬಳಸಲ್ಪಡುವ ಕಲಾಪ್ರಕಾರವಾಗಿದ್ದು ಈ ಕಲೆಯಲ್ಲಿನ ವೈವಿಧ್ಯತೆಗಳ ಬಗ್ಗೆ ಗುರುವಾಯೂರು ಬಳಿಯ ಚಾಲ್ಕಾಡ್ ಗ್ರಾಮದ ವಲ್ಲಭಟ್ ಕೇಂದ್ರದ ಕಲಾವಿದರು ಪ್ರದರ್ಶನ ನೀಡಿದರು.
ಖಡ್ಗ ಹಿಡಿದು ಎದುರಾಳಿಗಳು ಪರಸ್ಪರ ಕಾದಾಡುವ ರೋಮಾಂಚಕತೆಯು ವೇದಿಕೆಯಲ್ಲಿ ಮೂಡಿಬಂದಾಗ ಪ್ರೇಕ್ಷಕರೂ ಉಸಿರು ಬಿಗಿಹಿಡಿದಿದ್ದರು. ಬರೀಮೈಯ ಮೇವೆ ಕತ್ತಿಯಿಂದ ಮಸಾಜ್ ಮಾಡಿಕೊಳ್ಳುವ ಪ್ರಕಾರ, ಸಿಂಹ, ಹುಲಿ, ಸರ್ಪ, ಮಾರ್ಜಾಲ, ಕೋಳಿ, ಮೀನು ಇತ್ಯಾದಿ ಪ್ರಾಣಿಗಳ ಭಂಗಿಯ ನೃತ್ಯಪ್ರಕಾರಗಳು, ಕಠಾರಿಯೊಂದಿಗೆ ಎದುರಾಳಿಯನ್ನು ಮಣಿಸುವ ವಿಧಾನ, ಕತ್ತಿ ಝಳಪಿಸುತ್ತಾ ವೈರಿಯನ್ನು ಬಗ್ಗುಬಡಿಯುವ ವೀರನ ಚಾಕಚಕ್ಯತೆ ಕೂಡ ಕಲರಿ ಪಯಟ್ ವಿಶೇಷತೆ. ಚೂರಿಯಲ್ಲಿ ಶತ್ರು ಧಾಳಿ ನಡೆಸಿದಾಗ ಶಸ್ತ್ರರಹಿತನಾಗಿದ್ದರೂ ಕೂಡ ಹೇಗೆ ಧಾಳಿಯಿಂದ ತಪ್ಪಿಸಿಕೊಂಡು ಎದುರಾಳಿಯನ್ನು ಮಣ್ಣುಮುಕ್ಕಿಸ ಬಹುದು ಎಂಬ ತಂತ್ರಗಾರಿಕೆಯ ಬಗ್ಗೆಯೂ ಕಲರಿಪಯಟ್ ಪ್ರದರ್ಶನ ನಿರೂಪಿಸಿತು. ಕತ್ತಿ, ಕಠಾರಿ, ಚೂರಿ ಮಾತ್ರವಲ್ಲದೇ ಬೆತ್ತದೊಂದಿಗೆ ಹೊಡೆದಾಟದ ಪ್ರಕಾರವೂ ವೇದಿಕೆಯಲ್ಲಿ ಕಲಾಪ್ರೇಮಿಗಳ ಮನ ಸೆಳೆಯಿತು.
ವೈಜ್ಞಾನಿಕ ಯುಗದಲ್ಲಿಯೂ ಕಲರಿಪಯಟ್ ಕಲೆ ಹೆಚ್ಚು ಆಕರ್ಷಕ ವಾಗುತ್ತಿದ್ದು, ಈ ಕಲೆ ಯಾರನ್ನೂ ಹೊಡೆದುರುಳಿಸಲು ಅಥವಾ ಸಾಯಿಸಲು ಬಳಸುವಂತಿಲ್ಲ. ಬದಲಿಗೆ, ಅಪಾಯ ಒದಗಿದಾಗ ಸ್ವರಕ್ಷಣೆಗೆ ಕಲರಿಪಯಟ್ ಬಳಕೆಯಾಗುತ್ತದೆ. ಅದರಲ್ಲಿಯೂ ಮಹಿಳೆಯರು ಈ ಕಲಾ ಸಾಧನೆ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಳಬಲ್ಲರು ಎಂದು ವಲ್ಲಭಟ್ ಕೇಂದ್ರದ ಮುಖ್ಯಸ್ಥ ಕೃಷ್ಣದಾಸ್ ಹೇಳಿದರು.
ಕಲರಿಪಯಟ್ ಕೇವಲ ಸಮರಕಲೆ ಮಾತ್ರವಾಗಿರದೇ ಅದೊಂದು ಜೀವನಶೈಲಿ ಕೂಡ ಹೌದು ಎಂದು ಬಣ್ಣಿಸಿದ ಕೃಷ್ಣದಾಸ್, ದಿನನಿತ್ಯ ಈ ಕಲೆಯ ಅಭ್ಯಾಸದಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದೂ ಅಭಿಪ್ರಾಯಪಟ್ಟರು. ಕೇರಳದ ಕಡಲತಡಿಯ ಈ ವಿಶಿಷ್ಟ ನೃತ್ಯಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕ್ರೀಡಾ ಕಲೆಯಾಗಿ ಜನಪ್ರಿಯವಾಗಿದ್ದು ಭಾರತದ ರೋಮಾಂಚಕ ಕಲೆಗೆ ಸಂದ ಗೌರವ ಎಂದೂ ಅವರು ಹೆಮ್ಮೆಯಿಂದ ನುಡಿದರು. ಕೊಡಗು ಜಿಲ್ಲೆಯ ತಂಪು ಹವಾಮಾನ ಕಲರಿಪಯಟ್ನಂತ ಕಲೆಯ ಅಭ್ಯಾಸಕ್ಕೆ ಅತ್ಯಂತ ಸೂಕ್ತ ಎಂದೂ ಕಲರಿಪಯಟ್ ಕಲಾ ಕುಟುಂಬದಲ್ಲಿ ಎಂಟನೇ ತಲೆಮಾರಿನವರಾದ ಕೃಷ್ಣದಾಸ್ ಮಂಜಿನ ನಗರಿಯ ಹವಾಮಾನದ ಬಗ್ಗೆ ಶ್ಲಾಘಿಸಿದರು. ವಲ್ಲಭಟ್ ಕೇಂದ್ರದ 12 ಕಲಾವಿದರು ಕಲರಿಪಯಟ್ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.