ಸೋಮವಾರಪೇಟೆ, ಮಾ. 27: ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷರ ಆಯ್ಕೆ ಬಗ್ಗೆ ಎದ್ದಿರುವ ಅಸಮಾಧಾನ ಚುನಾವಣಾ ಹೊಸ್ತಿಲಿನಲ್ಲಿಯೂ ಬಗೆಹರಿಯುವಂತೆ ಕಾಣುತ್ತಿಲ್ಲ. ಕೆ.ಎಂ. ಗಣೇಶ್ ಅವರ ಆಯ್ಕೆ ಬಗ್ಗೆ ಸೋಮವಾರಪೇಟೆ ಭಾಗದ ಹಲವಷ್ಟು ಮುಖಂಡರು ಅತೃಪ್ತಿ ವ್ಯಕ್ತಪಡಿಸುತ್ತಲೇ ಬಂದಿದ್ದು, ಇದೀಗ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನೂ ಬಹಿಷ್ಕರಿಸುವದಾಗಿ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ ಮೊದಲಾದವರು ಘೋಷಿಸಿದ್ದಾರೆ..

ನೂತನ ಜಿಲ್ಲಾಧ್ಯಕ್ಷರು ತನ್ನ ಅಧಿಕಾರದ ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ರಾಜ್ಯಮಟ್ಟದ ನಾಯಕರು ಆಗಮಿಸುವದಾಗಿ ತಪ್ಪು ಮಾಹಿತಿ ನೀಡಿರುವದು ಖಂಡನೀಯ. ಕಾರ್ಯಕರ್ತರ ದಿಕ್ಕು ತಪ್ಪಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಡಿಸಿಲ್ವಾ ಹೇಳಿದರು.

ಸೋಮವಾರಪೇಟೆ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಸಂಜಯ್ ಜೀವಿಜಯ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದೆವು. ಇದಕ್ಕೆ ವರಿಷ್ಠರಿಂದ ಮನ್ನಣೆ ದೊರೆತಿಲ್ಲ. ಮುಂದಿನ ದಿನಗಳಲ್ಲಿ ಜೀವಿಜಯ ಅವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೋಷ್ಠಿಯಲ್ಲಿದ್ದ ಜೆಡಿಎಸ್ ನಗರಾಧ್ಯಕ್ಷ ಜಯಾನಂದ, ಕಾರ್ಯದರ್ಶಿ ವಿಜಯ್, ಹೇಮಂತ್, ಕ್ಷೇತ್ರ ವಕ್ತಾರ ಎ.ಜೆ. ಕೃಷ್ಣಪ್ಪ ಅವರುಗಳು ತಿಳಿಸಿದರು.