ಮಡಿಕೇರಿ, ಮಾ. 26: ಕ್ಷಯ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ಹೇಳಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ನಗರದ ಬಾಲಭವನದ ಆವರಣದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ವೈದ್ಯರ ಸಲಹೆ ಪಡೆಯುವಂತಾಗಬೇಕು. ಈ ಬಗ್ಗೆ ಜಾಗೃತಿ ಅಗತ್ಯ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರು ರಾಷ್ಟ್ರದಲ್ಲಿ ಕೇರಳ ರಾಜ್ಯದ ವೈನಾಡು ಜಿಲ್ಲೆಯನ್ನು ಈಗಾಗಲೇ ಕ್ಷಯರೋಗ ಮುಕ್ತವನ್ನಾಗಿ ಘೋಷಿಸಿದ್ದು, ಅದೇ ರೀತಿ ಕೊಡಗು ಜಿಲ್ಲೆಯನ್ನು ಕ್ಷಯ ರೋಗ ಪ್ರಕರಣಗಳು ಇಲ್ಲದಂತೆ ಮಾಡಬೇಕಿದೆ ಎಂದರು.

ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನದ ಸಭಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಷಯ ರೋಗ ಸಂಬಂಧ ಹೊಸ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಔಷಧಿ ಪಡೆಯುವಂತಾಗಬೇಕು. ಸುತ್ತಮುತ್ತಲಿನ ಪರಿಸರ ಹಾಗೂ ಮನೆಯಲ್ಲಿ ಗಾಳಿ-ಬೆಳಕು ಇರಬೇಕು ಇದರಿಂದ ಕ್ಷಯರೋಗ ಬರದಂತೆ ತಡೆಯಬಹುದಾಗಿದೆ ಎಂದು ಡಾ. ಮೋಹನ್ ಹೇಳಿದರು.

ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್ ಮಾತನಾಡಿ, 1882 ರಲ್ಲಿ ಕ್ಷಯ ರೋಗವನ್ನು ಪತ್ತೆಹಚ್ಚಲಾಯಿತು. ಈ ಕಾಯಿಲೆಯು ವಿಶ್ವ ವ್ಯಾಪಿ ಇದ್ದು, ಇದನ್ನು ನಿಯಂತ್ರಣ ಮಾಡಲು ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಹೇಳಿದರು.

ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಕಡಿಮೆಯಾಗುವದು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೋರಿಸಬೇಕಿದೆ. ಕ್ಷಯರೋಗವನ್ನು ಸಂಪೂರ್ಣ ಗುಣ ಮಾಡಲು ಮಾತ್ರೆ ಇದ್ದು, ಇದನ್ನು ವೈದ್ಯರ ಸಲಹೆಯಂತೆ ತಪ್ಪದೇ ಕಾಲಕಾಲಕ್ಕೆ ತೆಗೆದುಕೊಳ್ಳಬೇಕಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಮಾತನಾಡಿ, ಕ್ಷಯ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ನೀಡಬೇಕು. ಯಾವದೇ ಕಾರಣಕ್ಕೂ ನಿರ್ಲಕ್ಷಿಸಬಾರದು, ಕ್ಷಯ ರೋಗಿಗಳಿಗೆ ಮಾಸಿಕ ರೂ. 500 ಸಹಾಯ ಧನ ನೀಡುತ್ತಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ 6 ಸಾವಿರ ಜನ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 600 ಮಂದಿ ಸಾಯುತ್ತಿದ್ದಾರೆ. ಈ ಕಾಯಿಲೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದೆ. ಆದ್ದರಿಂದ ಕ್ಷಯರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಎಂದು ಅವರು ಸಲಹೆ ನೀಡಿದರು.

ಕ್ಷಯರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಫದಲ್ಲಿ ಕ್ರಿಮಿನಾಶಕಗಳು ಕಂಡುಬರುತ್ತದೆ. ಕ್ಷ ಕಿರಣ ಪರೀಕ್ಷೆಯ ಮೂಲಕ ರೋಗವನ್ನು ಕಂಡು ಹಿಡಿಯಬಹುದು. ಪರೀಕ್ಷೆಗೆ ತಡ ಮಾಡಿದರೆ ರೋಗವು ಇನ್ನೊಬ್ಬರಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ಷಯ ರೋಗವು ಗೊತ್ತಾದ ತಕ್ಷಣ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಗುಣಮುಖರಾಗಬಹುದು ಎಂದರು.

ಕ್ಷಯರೋಗ ದಿನಾಚರಣೆಯ ಪ್ರಯುಕ್ತ ನಗರದ ಬಾಲಮಂದಿರದಿಂದ ಜಾಥಾ ಹೊರಟು ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಸ್ಪತ್ರೆಯ ಸಭಾಂಗಣದವರೆಗೆ ಜಾಥಾ ನಡೆಯಿತು.

ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್. ಆನಂದ, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕುಲಕರ್ಣಿ ಇತರರು ಇದ್ದರು.

ಕ್ಷಯ ರೋಗ ನಿಯಂತ್ರಣ ವಿಭಾಗದ ಮಹದೇವಪ್ಪ ಸ್ವಾಗತಿಸಿದರು, ಲೀಲಾವತಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ನಿರೂಪಿಸಿ, ವಂದಿಸಿದರು.