ಸೋಮವಾರಪೇಟೆ, ಮಾ.24: ಸರ್ಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸಿಗುವಂತಾಗ ಬೇಕು. ಸಮಾಜವೂ ಸಹ ಅವರನ್ನು ಗೌರವ ಭಾವದಿಂದ ಕಾಣಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎಂ.ಎನ್. ನಾಗರಾಜು ಅಭಿಪ್ರಾಯಿಸಿದರು.
ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ನ ವಾರ್ಷಿಕೋತ್ಸವದ ಅಂಗವಾಗಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಶ್ರೇಯೋಭಿ ವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್ ಹಿರಿಯರಿಗೆ ದಾರಿದೀಪವಾಗಬೇಕು. ನೊಂದ ಜೀವಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಎಸ್.ಪಿ. ಶಿವಮೂರ್ತಿ ಎಂ.ಎಸ್. ಮಾತನಾಡಿ, ಕೃಷಿಯ ಮೂಲಕ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕೃಷಿ ಹಿರಿಯ ಜೀವಗಳಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಟ್ಟಿದೆ. ಆದರೆ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತೀವೃಷ್ಟಿ, ಅನಾವೃಷ್ಟಿಗೆ ಯಾರು ಆತಂಕ ಪಡದೆ ತಮ್ಮ ವೃತ್ತಿಯನ್ನು ಮುಂದುವರಿಸಿ ಎಂದು ಹಿರಿಯ ನಾಗರಿಕರಿಗೆ ಧೈರ್ಯ ತುಂಬಿದರು.
ಹಿರಿಯ ನಾಗರಿಕರು ಸ್ವಾಭಿಮಾನಿಗಳು, ಕೊನೆ ಕಾಲದಲ್ಲಿ ಸಾಕಿದವರೆಲ್ಲಾ ಕೈಬಿಡುತ್ತಾರೆ. ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿದ್ದೇವೆ. ತೆರಿಗೆ ಹಣವನ್ನು ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೊಳ್ಳೆಹೊಡೆಯುತ್ತಾರೆ. ಹಿರಿಯ ನಾಗರಿಕರಿಗೆ 5ಸಾವಿರ ರೂ.ಗಳ ಮಾಶಾಸನ ನೀಡಬೇಕೆಂದು ಹಿರಿಯರಾದ ಜಿ.ವಿ.ಜಯರುದ್ರಪ್ಪ ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಟ್ರಸ್ಟ್ನ ಅಧ್ಯಕ್ಷ ಎಂ.ಟಿ.ದಾಮೋಧರ, ನಿವೃತ್ತ ನ್ಯಾಯಾಧೀಶ ಎಂ.ಆರ್.ದೇವಪ್ಪ, ನಿವೃತ್ತ ಮಾಹಿತಿ ಆಯುಕ್ತರಾದ ಜೆ.ಸಿ.ವಿರೂಪಾಕ್ಷಯ್ಯ, ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ. ಬಿ.ಸಿ.ನವೀನ್ ಕುಮಾರ್, ಹಿರಿಯ ನಾಗರಿಕರಾದ ಜಿ.ಎಸ್.ಪ್ರಭುದೇವ್, ಎಚ್.ಸಿ.ನಾಗೇಶ್, ಎಸ್.ಪಿ.ಪ್ರಸನ್ನ, ಸಿ.ಕೆ.ಮಲ್ಲಪ್ಪ, ಎಸ್.ಎಂ.ಡಿಸಿಲ್ವಾ ಉಪಸ್ಥಿತರಿದ್ದರು.