ವೀರಾಜಪೇಟೆ, ಮಾ. 21: ವೀರಾಜಪೇಟೆ ಬಳಿಯ 'ಕುಕ್ಲೂರು ಮುತ್ತಪ್ಪ ದೇವರ ತೆರೆ ಮಹೋತ್ಸವ'ವನ್ನು ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುತ್ತಪ್ಪ ವೆಳ್ಳಾಟಂನೊಂದಿಗೆ ಪ್ರಾರಂಭಗೊಂಡ ತೆರೆಮಹೋತ್ಸವವು ಶಾಸ್ತಪ್ಪ ವೆಳ್ಳಾಟಂ, ಗುಳಿಗ ಮತ್ತು ಬಸುರಿಮಲ ವೆಳ್ಳಾಟಂ ನಡೆದು, ಮುತ್ತಪ್ಪನ್, ತಿರುವಪ್ಪನ್ ತೆರೆಯ ಬಳಿಕ ಶ್ರೀ ಶಾಸ್ತಪ್ಪನ್ ಮತ್ತು ಕರಿಂಗುಟ್ಟಿ ಶಾಸ್ತಪ್ಪನ ವಿಶೇಷ ತೆರೆಗಳೊಂದಿಗೆ ಮುತ್ತಪ್ಪನ ತೆರೆ ಮಹೋತ್ಸವವ ಮುಕ್ತಾಯಗೊಂಡಿತು.

ತೆರೆ ಮಹೋತ್ಸವದ ಸಂದರ್ಭ ಭಕ್ತಾದಿಗಳಿಗೆ ಎರಡು ದಿನಗಳ ಕಾಲ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು, ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.