ಸುಂಟಿಕೊಪ್ಪ, ಮಾ. 7: ತೋಟ ಕಾರ್ಮಿಕ ಯುವಕನೊಬ್ಬ ಹಲಸಿನ ಮರವನ್ನು ಏರಲು ಹೋಗಿ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾದ ಘಟನೆ ವರದಿಯಾಗಿದೆ

ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ಕೋಟೆರ ಶಂಭು ಚಂಗಪ್ಪ ಅವರಿಗೆ ಸೇರಿದ ಕೊಡಗರಹಳ್ಳಿ ವ್ಯಾಪ್ತಿಯ ಮಾರುತಿ ನಗರದಲ್ಲಿರುವ ಶಂಭು ತೋಟದಲ್ಲಿ ಕಾರ್ಮಿಕ ವಳ್ಳಿ ಎಂಬವರ ಪುತ್ರ ಹೇಮಂತ್ (20) ಕಾರ್ಮಿಕನಾಗಿ ದುಡಿಯುತ್ತಿದ್ದು ಎಂದಿನಂತೆ ಇಂದು ಬೆಳಿಗ್ಗೆ ತೋಟದಲ್ಲಿ ಕಾಫಿ ಗಿಡಗಳಿಗೆ ನೀರು ಹಾಯಿಸುವ ಕೆಲಸದಲ್ಲಿ ತೊಡಗಿದ್ದ ಎನ್ನಲಾಗಿದೆ. ಬೆಳಿಗ್ಗೆ 11ರ ಸಮಯದಲ್ಲಿ ತೋಟದ ಮಾಲೀಕರು ಕೆಲಸದ ನಿಮಿತ್ತ ಹೇಮಂತ್‍ಗೆ ದೂರವಾಣಿ ಕರೆ ಮಾಡಿದಾಗ ಯಾವದೇ ಪ್ರತಿಕ್ರಿಯೆ ಬಾರದ ಕಾರಣ ಸಹ ಕಾರ್ಮಿಕರನ್ನು ಬಿಟ್ಟು ಹುಡುಕಾಟ ನಡೆಸಲಾಗಿದೆ.

ಈ ಸಂದರ್ಭ ಸಂಜೆ 3.30 ಗಂಟೆಗೆ ಹಲಸಿನ ಮರದ ಕೆಳಗೆ ಹೇಮಂತ್ ಮೃತದೇಹ ಗೋಚರಿಸಿದೆ. ಹಲಸಿನ ಮರದ ಸಮೀಪ 11 ಕೆವಿ ವಿದ್ಯುತ್ ತಂತಿ ಹಾದುಹೋಗಿದೆ. ಕೂಡಲೇ ಮಾಲೀಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ತೆರಳಿ ಸ್ಥಳ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.