ಸೋಮವಾರಪೇಟೆ, ಮಾ. 7: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಮೇಲಿನಿಂದ ಕೆಳಬಿದ್ದು ಕಾರ್ಮಿಕರೋರ್ವರು ದುರ್ಮರಣಕ್ಕೀಡಾದ ಘಟನೆ ಇಂದು ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಹಾನಗಲ್ಲು ಬಾಣೆ ನಿವಾಸಿ ಶಿವ (55) ಎಂಬವರು ಇಂದು ಮುಂಜಾನೆ ಮರ ಕಪಾತು ಮಾಡಲೆಂದು ನಗರಳ್ಳಿ ಗ್ರಾಮದ ತನುಷಿ ಅವರ ತೋಟಕ್ಕೆ ತೆರಳಿದ್ದು, ಮಧ್ಯಾಹ್ನದ ವೇಳೆಗೆ ಮರ ಕಡಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಸುಮಾರು 45 ಅಡಿಯಿಂದ ಬಿದ್ದಿರುವ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಕಾನೂನು ಕ್ರಮಕೈಗೊಂಡಿದ್ದಾರೆ.

ಮೃತರು ಪತ್ನಿ ಭಾಗ್ಯ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 8 ರಂದು (ಇಂದು) ಹಾನಗಲ್ಲು ಬಾಣೆಯ ರುದ್ರಭೂಮಿಯಲ್ಲಿ ನಡೆಯಲಿದೆ.