ಮಡಿಕೇರಿ, ಮಾ. 1: ಲೋಕಸಭಾ ಚುನಾವಣೆಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟವಾಗಲಿದ್ದು, ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಭಾಗವಹಿಸುವದರಿಂದ ಉತ್ತಮ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಹಾಗೂ ಮತದಾನದ ಮಹತ್ವದ ಕುರಿತು ವಿಶೇಷ ಜಾಗೃತಿ ಮೂಡಿಸಲು ಮತದಾರರ ನೋಂದಣಿ ಅಭಿಯಾನ ಹಾಗೂ ಮತದಾನ ಜಾಗೃತಿ ಜಾಥಾ ವಿಶೇಷ ಅಭಿಯಾನವು ತಾ. 5 ರಿಂದ 12 ರವರೆಗೆ ನಡೆಯಲಿದೆ ಎಂದು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷ (ಸ್ವೀಪ್) ಕೆ.ಲಕ್ಷ್ಮಿಪ್ರಿಯ ಅವರು ತಿಳಿಸಿದ್ದಾರೆ.

ತಾ. 5 ರಂದು ಮಡಿಕೇರಿ, 6 ರಂದು ಸೋಮವಾರಪೇಟೆ, 7 ರಂದು ವೀರಾಜಪೇಟೆ ತಾಲೂಕು ಮಟ್ಟದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮತದಾರರ ನೋಂದಣಿ, ಜಾಗೃತಿ ಜಾಥಾ ಜರುಗಲಿದೆ. ಹಾಗೆಯೇ ವಿದ್ಯುನ್ಮಾನ ಮತಯಂತ್ರ ಕುರಿತಂತೆ ಮಾಹಿತಿ ನೀಡುವದು ಜೊತೆಗೆ ಅಣಕು ಮತದಾನ ನಡೆಯಲಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದರು.

ತಾ.8 ರಂದು ಮಡಿಕೇರಿ, ತಾ. 11 ರಂದು ಸೋಮವಾರಪೇಟೆ ಮತ್ತು ತಾ. 12 ರಂದು ವೀರಾಜಪೇಟೆ ತಾಲೂಕುಗಳ ತಾಲೂಕು ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತದಾರರ ನೋಂದಣಿ ಮತ್ತು ಜಾಗೃತಿ ಜಾಥಾ ನಡೆಯಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದರು.

ಮತದಾನದ ಮಹತ್ವ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಬಿಎಜಿ ಸದಸ್ಯರು, ಸ್ಥಳೀಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಗೂ ಇತರೆ ಕ್ಷೇತ್ರ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯ ಅವರು ತಿಳಿಸಿದ್ದಾರೆ.