*ಗೋಣಿಕೊಪ್ಪಲು, ಫೆ. 27: ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ಬಸವೇಶ್ವರ ಬಡಾವಣೆಗೆ ವಸತಿ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಗ್ರಾ.ಪಂ. ಮುಂದಾಗುತ್ತಿಲ್ಲ ಎಂದು ಬುಡಕಟ್ಟು ಕಾರ್ಮಿಕರ ಸಂಘ ಮತ್ತು ಬಸವೇಶ್ವರ ಬಡಾವಣೆ ನಿವಾಸಿಗಳು ಹಾತೂರು ಗ್ರಾ.ಪಂ. ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಕಳೆದ ಎರಡು ದಿನಗಳಿಂದ ಬುಡಕಟ್ಟು ಕಾರ್ಮಿಕ ಸಂಘದ ಸಂಚಾಲಕ ವೈ.ಬಿ. ಗಪ್ಪು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹಕ್ಕೆ ಬಡಾವಣೆ ನಿವಾಸಿಗಳು ಮುಂದಾದರು. ಹಾತೂರು ಗ್ರಾ.ಪಂ. ಪಂಚಾಯಿತಿ ಅಧಿಕಾರಿ ಬಡಾವಣೆಯ ಮುಂದುವರಿಕೆ ಕೆಲಸಗಳನ್ನು ಮಾಡುತ್ತಿಲ್ಲ; ಹಕ್ಕುಪತ್ರ ನೀಡಿರುವದನ್ನು ಹೊರತುಪಡಿಸಿ ಬೇರೆ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿ ರುವದಿಲ್ಲ. ಹೀಗಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವದಾಗಿ ವೈ.ಬಿ. ಗಪ್ಪು ಆರೋಪಿಸಿದರು.

ಗ್ರಾ.ಪಂ. ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿ ತಕ್ಷಣವೇ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ, ತಾಲೂಕು ಐ.ಟಿ.ಡಿ.ಪಿ. ಅಧಿಕಾರಿ ಮತ್ತು ಗ್ರಾ.ಪಂ. ಉಪಾಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ತಕ್ಷಣವೇ ಬರುವಂತೆ ತಿಳಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸವೇಶ್ವರ ಬಡಾವಣೆಯ ಮನೆಗಳು ಹಾಗೂ ಶೌಚಾಲಯ, ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತದನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿ.ಕೆ. ಬೋಪಣ್ಣ ಅವರು ಮುಂದಿನ ಹತ್ತು ದಿನದ ಒಳಗೆ ಗುರುತಿಸಿದ ಸ್ಥಳವನ್ನು ಸಮತಟ್ಟು ಮಾಡಿ ಹಕ್ಕು ಪತ್ರದಲ್ಲಿ ನೀಡಿರುವ ಸಂಖ್ಯೆಗೆ ಅನುಗುಣವಾಗಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಿರುವ ಪೂರಕ ವ್ಯವಸ್ಥೆ ಮಾಡುವದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು. ಐ.ಟಿ.ಡಿ.ಪಿ. ಇಲಾಖೆಯಲ್ಲಿ ಈಗಾಗಲೇ ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನ ಇದೆ. ಮನೆಗಳ ನಿರ್ಮಾಣದ ಕಾಮಗಾರಿ ಪ್ರಾರಂಭ ವಾಗುತ್ತಿದ್ದಂತೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಒದಗಿಸಲಾಗುವದು. ಹಂತ ಹಂತವಾಗಿ ಮೂಲಭೂತ ವ್ಯವಸ್ಥೆ ಗಳನ್ನು ಸಮರ್ಪಕವಾಗಿ ನೀಡಲಾಗುವದು. ಹೀಗಾಗಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟು ಅಧಿಕಾರಿ ಹಾಗೂ ಜನಪ್ರತಿನಿಧಿಗಳಲ್ಲಿ ವಿಶ್ವಾಸವಿಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಇದಕ್ಕೆ ಪ್ರತಿಭಟನಾಕಾರರು ಆದಷ್ಟು ಬೇಗ ಮಳೆಗಾಲ ಪ್ರಾರಂಭಕ್ಕೂ ಮೊದಲು ಮನೆ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ವಾಸಿಸಲು ಸಾಧ್ಯವಾಗುವದಿಲ್ಲ. ನಿಮ್ಮ ಮೇಲೆ ವಿಶ್ವಾಸವಿಟ್ಟು ಧರಣಿ ಸತ್ಯಾಗ್ರಹವನ್ನು ಹಿಂಪಡೆಯುತ್ತಿದ್ದೇವೆ ಎಂದು ಪ್ರತಿಭಟನೆಯನ್ನು ಕೈಬಿಡಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಮಾತನಾಡಿ ಹಂತ ಹಂತವಾಗಿ ಮೂಲಭೂತ ಸೌಕರ್ಯ ಗಳನ್ನು ಮಾಡಿಕೊಡಲಾಗುತ್ತದೆ. ನಮ್ಮ ಅವಧಿಯಲ್ಲಿ ಶೀಘ್ರಗತಿಯಲ್ಲಿ ಬಡಾವಣೆಯ ಚಟುವಟಿಕೆಗಳು ನಡೆಯುತ್ತಿದೆ. ಪ್ರತಿಭಟಿಸುವ ಮೂಲಕ ಯಾವದೇ ಅಭಿವೃದ್ದಿ ಸಾಧ್ಯವಾಗುವದಿಲ್ಲ. ಕಾನೂನು ನಿಯಮಗಳಂತೆ ಪ್ರಗತಿ ಹಂತವನ್ನು ಮುಟ್ಟಬೇಕು. ಹೀಗಾಗಿ ಪ್ರತಿಭಟನೆ ಯನ್ನು ಕೈಬಿಡುವಂತೆ ಪ್ರತಿಭಟನಾ ಕಾರರ ಮನವೊಲಿಸಿದರು. ಐ.ಟಿ.ಡಿ.ಪಿ. ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಮನೆ ನಿರ್ಮಾಣವಾಗುತ್ತಿರುವಂತೆ ರಸ್ತೆಗಳ ಕಾಮಗಾರಿಗೂ ಹಣ ಒದಗಿಸ ಲಾಗುತ್ತದೆ. ಈಗಾಗಲೇ 12 ಲಕ್ಷ ವೆಚ್ಚದಲ್ಲಿ ಕೊಳವೆಬಾವಿಯನ್ನು ತೆರೆಯಲಾಗಿದೆ. ಮುಂದಿನ ಹಂತದಲ್ಲಿ ವಿದ್ಯುತ್ ವ್ಯವಸ್ಥೆ ಬಂದ ನಂತರ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಅಲ್ಲಿಯವರೆಗೆ ಸ್ವನಿಯಂತ್ರಿತ ಕೊಳವೆ ಬಾವಿಯನ್ನು ತಾತ್ಕಾಲಿಕ ಬಳಸಿಕೊಳ್ಳುವಂತೆ ತಿಳಿಸಿದರು. ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟ್ಟೀರ ದರ್ಶನ್ ನಂಜಪ್ಪ ಮಾತನಾಡಿ, ಬಡಾವಣೆಯ ಕಾಮಗಾರಿಗಳಿಗೆ ಪ್ರಾಥಮಿಕ ಹಂತವಾಗಿ ಮರದ ಬೇರುಗಳನ್ನು ಕಿತ್ತು ಸಮತಟ್ಟು ಮಾಡಲಾಗಿದೆ. ಇದು ತನ್ನ ಸ್ವ ಇಚ್ಚೆಯಿಂದ ಮಾಡಿದ ಕಾರ್ಯ. ಬಡಾವಣೆಯ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಗಳಿಗೆ ಸಂಬಂಧಪಟ್ಟವ ರೊಂದಿಗೆ ಮಾತುಕತೆ ನಡೆಸಲಾಗಿದೆ. ಅತಿ ಶೀಘ್ರದಲ್ಲೇ ಕಾನೂನು ಬದ್ಧವಾಗಿ ಮನೆಗಳ ನಿರ್ಮಾಣ ಆಗಲಿದೆ ಎಂದು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು.