ಸೋಮವಾರಪೇಟೆ, ಫೆ. 27: ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಜಾತ್ರೋತ್ಸವವು ಮಾ. 17, 18 ಮತ್ತು 19 ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾ. 17 ರಂದು ಬೆಳಿಗ್ಗೆ 4.30ಕ್ಕೆ ಗಣಪತಿ ಹೋಮದೊಂದಿಗೆ ಜಾತ್ರೋತ್ಸವದ ಪೂಜಾ ಕೈಂಕರ್ಯಗಳೂ ಆರಂಭವಾಗುತ್ತವೆ. 6.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ 5.30 ಗಂಟೆಗೆ ದೇವಸ್ಥಾನದಲ್ಲಿನ ನಾಗನ ಸನ್ನಿಧಿಯಲ್ಲಿ ಕೊಳಪುರಂ ಮನಹಿಲ್ಲಂ ತಂತ್ರಿಗಳ ಪೌರೋಹಿತ್ಯದಲ್ಲಿ ವಿಶೇಷ ಆಶ್ಲೇಷ ಬಲಿ ನಡೆಯಲಿದೆ. 6 ಗಂಟೆಗೆ ನೂತನ ಕಚೇರಿ ಉದ್ಘಾಟನೆ ಹಾಗೂ ಅನ್ನದಾನ ಮಂಟಪದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ಕುಮಾರ್ ವಹಿಸಲಿದ್ದು, ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಪಾಲ್ಗೊಳ್ಳಲಿದ್ದಾರೆ.
ಮಾ. 18 ರಂದು ಮಧ್ಯಾಹ್ನ 1.30ಕ್ಕೆ ಕಲಶ ಪೂಜೆ, 3.30ಕ್ಕೆ ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ವೆಳ್ಳಾಟಂನೊಂದಿಗೆ ಉತ್ಸವಗಳು ಆರಂಭವಾಗಲಿದೆ. ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಪಟ್ಟಣದಲ್ಲಿ ಕಲಶ ಮೆರವಣಿಗೆ ನಡೆಯಲಿದೆ. ಸಂಜೆ 6.30 ರಿಂದ ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತಾವು, ಕಂಡಕರ್ಣ, ಭಗವತಿ, ರಕ್ತಚಾಮುಂಡಿ, ಪೊಟ್ಟನ್ ದೈವಗಳ ವೆಳ್ಳಾಟಂ ನಡೆಯಲಿದ್ದು, ನಂತರ ದೇವರ ಕಳಿಕ್ಕಾಪಾಟ್ ನೆರವೇರಲಿದೆ. ಮಾ. 19 ರಂದು ಬೆಳಗ್ಗಿನ ಜಾವ 1 ಗಂಟೆಯಿಂದ ಭಗವತಿ, ಕಂಡಕರ್ಣ, ಪೊಟ್ಟನ್, ಕರಿಂಗುಟ್ಟಿ ಶಾಸ್ತಾವು, ಮುತ್ತಪ್ಪ-ತಿರುವಪ್ಪ, ರಕ್ತಚಾಮುಂಡಿ, ವಿಷ್ಣುಮೂರ್ತಿ, ಗುಳಿಗ ದೈವಗಳ ಕೋಲಗಳು ನಡೆಯಲಿವೆ. ಬೆಳಗ್ಗಿನ ಜಾವ 4.30 ಗಂಟೆಗೆ ಪೊಟ್ಟನ್ ದೈವ ಅಗ್ನಿಗೇರುವದು, ಬೆಳಿಗ್ಗೆ 10 ಗಂಟೆಗೆ ಕಂಡಕರ್ಣ ದೈವದ ಗುರುಶ್ರೀದರ್ಪಣ, ಮಧ್ಯಾಹ್ನ 1.30ಕ್ಕೆ ಗುಳಿಗಾ ದೇವರಿಗೆ ವಿಶೇಷ ಪೂಜೆ ನಡೆದು, ಅಪರಾಹ್ನ 3 ಗಂಟೆಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ. ಪುನರ್ಪ್ರತಿಷ್ಠಾಪನೆ ಮತ್ತು ಜಾತ್ರೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಅನ್ನದಾನ ಕಾರ್ಯ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ತಿಳಿಸಿದ್ದಾರೆ.