ಮಡಿಕೇರಿ, ಫೆ. 27: ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೊದಲ 2 ಜೀವಂತ ಹೆರಿಗೆಯ ಪೂರ್ವದ ಕೊನೆಯ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ ರೂ.1 ಸಾವಿರಗಳನ್ನು (ಒಟ್ಟು ರೂ. 6,000) ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಸೌಲಭ್ಯವು 1.5.2018 ರ ನಂತರದ ಪ್ರಸವದ ಗರ್ಭಿಣಿ ಮಹಿಳೆಯರಿಗೆ ಹಾಗೂ 1.11.2018 ರ ನಂತರದ ಬಾಣಂತಿಯರಿಗೆ (ರೂ. 3000) ಸಹಾಯಧನ ಪಡೆಯಲು ಅವಕಾಶವಿದೆ. ಫಲಾನುಭವಿಯು ಬಿ.ಪಿ.ಎಲ್. ಕಾರ್ಡ್‍ನ್ನು ಕಡ್ಡಾಯವಾಗಿ ಹೊಂದಿದ್ದು, ಫಲಾನುಭವಿಯು ಮೊದಲನೇ ಅರ್ಜಿ ಸಲ್ಲಿಸುವಾಗ 7 ತಿಂಗಳ ಗರ್ಭಿಣಿಯಾಗಿದ್ದು, ಕನಿಷ್ಟ 1 ನಿಯಮಿತ ಆರೋಗ್ಯ ತಪಾಸಣೆಗೆ ಒಳಪಟ್ಟಿರಬೇಕಾಗುತ್ತದೆ. ಎರಡನೇ ಅರ್ಜಿಯನ್ನು ಸಾಂಸ್ಥಿಕ ಹೆರಿಗೆಯ ನಂತರ ನೀಡಬೇಕಾಗುತ್ತದೆ. ಮಾತೃಶ್ರೀ ಯೋಜನೆಯ ನೋಂದಾವಣೆಗೆ ನಿಗದಿಪಡಿಸಿದ ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತವೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿಪಿಎಲ್ ಕಾರ್ಡ್, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ.