ಮಡಿಕೇರಿ, ಫೆ. 24: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‍ಮೊಟ್ಟೆಯ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್, ಆರೆಸ್ಸೆಸ್ ಸೇವಾ ಪ್ರಮುಖರಾದ ವಿಠಲ್ ಹಾಗೂ ಬಾಬು ಅವರುಗಳು ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯರಾದ ರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ವೀರಸ್ವಾಮಿ, ಗ್ರಾ.ಪಂ. ಸದಸ್ಯರಾದ ಮಧುಸೂದನ್, ಕಂಠಿಕಾರ್ಯಪ್ಪ, ಪ್ರವೀಣ್, ಶಂಕರ್ ಮೊದಲಾದವರು ಉಪಸ್ಥಿತರಿದ್ದರು. ದಿನದ ಮಹತ್ವ ಕುರಿತು ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಮಾತನಾಡಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ವಿಶೇಷ ಪೂಜೆಯೊಂದಿಗೆ ಪ್ರಸಾದ ವಿತರಿಸಲಾಯಿತು.

ಐಗೂರಿನಲ್ಲಿ ಸೋಮವಾರಪೇಟೆ : ಐಗೂರು ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಹಿಂದೂಪರ ಸಂಘಟನೆಗಳ ಕಾರ್ಯಕರ್ತರುಗಳಾದ ಯತೀಶ್, ಮನೋಜ್, ಸತೀಶ್, ಕಿರಣ್ ಸೇರಿದಂತೆ ಇತರರು ಐಗೂರು ಜಂಕ್ಷನ್‍ನಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.