ಮಡಿಕೇರಿ, ಫೆ. 20 : ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸರ್ವಜ್ಞರ ಕೊಡುಗೆ ಅಪಾರವಾದದ್ದು, ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಅಭಿಪ್ರಾಯಪಟ್ಟರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸರ್ವಜ್ಞ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವದಕ್ಕೆ ಸರ್ವಜ್ಞರ ಕೊಡುಗೆ ಮಹತ್ತರವಾದದ್ದು. ಅವರು ರಚಿಸಿರುವ ವಚನಗಳಿಗೆ ಸಾರ್ವಕಾಲಿಕ ಮನ್ನಣೆ ದೊರಕಿರುವದು ಅವರ ಜ್ಞಾನ ಭಂಡಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶ ಭಕ್ತರಾಗಿದ್ದು, ಯುದ್ಧ ಕಲೆ, ಹೋರಾಟ ಮನೋಭಾವ, ಚಿಕ್ಕಂದಿನಿಂದಲೇ ಮೈಗೂಡಿಸಿ ಕೊಂಡಿದ್ದರು.

ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿವಾಜಿ ಅವರ ಜೀವನ ಮೌಲ್ಯವನ್ನು ತಿಳಿಸುವದರ ಮೂಲಕ ಯುವ ಪೀಳಿಗೆಯಲ್ಲಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ರಂಜನ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ ಶಿವಾಜಿಯವರ ತಾಯಿ ಜೀಜಾಬಾಯಿ ಅವರು ಶಿವಾಜಿ ಅವರನ್ನು ಬೆಳಸಿದಂತೆ, ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಶಿವಾಜಿಯ ಆದರ್ಶಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಸಾಮಾನ್ಯ ಜನರಲ್ಲಿ ಇದ್ದಂತಹ ಕಂದಾಚಾರ, ಮೂಡನಂಬಿಕೆ ಇವುಗಳನ್ನು ದೂರಗೊಳಿಸಿದ ಮಹಾನ್ ವ್ಯಕ್ತಿ ಸರ್ವಜ್ಞ.

ಶಿವಾಜಿ ಅವರು ಅಪ್ರತಿಮ ಹೋರಾಟಗಾರರು. ದೇಶದ ರಕ್ಷಣೆಗಾಗಿ ಹೋರಾಡಿದ ಮಹಾನ್ ದೇಶಭಕ್ತ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಿ.ಎಸ್.ಲೋಕೋಶ್ ಸಾಗರ್ ಮಾತನಾಡಿ, ಸರ್ವಜ್ಞ ಅವರು ತ್ರಿಪದಿಗಳನ್ನು ರಚಿಸಿ ಕಣ್ಣಿಗೆ ಕಂಡದ್ದನ್ನು ತ್ರಿಪದಿ ರೂಪಗಳಲ್ಲಿ ಜನರಿಗೆ ಪರಿಚಯಿಸಿ ದೇಶಕ್ಕೆ ಜ್ಞಾನವನ್ನು ನೀಡಿದ ದಾರ್ಶನಿಕರು.

ಶಿವಾಜಿ ಮೊಘಲರು ಮತ್ತು ನಿಜಾಮರ ವಿರುದ್ಧ ಹೋರಾಡಿದ ಧೀಮಂತ ವ್ಯಕ್ತಿ ಎಂದರು.

ಮರಾಠ ಸಮಾಜದ ಜಿಲ್ಲಾಧ್ಯಕ್ಷ ರಾಜಾರಾವ್ ಮಾತನಾಡಿ ಲಂಡನ್ ವಸ್ತು ಸಂಗ್ರಹಲಾಯದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಇರುವದು ಹೆಮ್ಮೆಯ ವಿಚಾರ ಎಂದರು.

ಕುಲಾಲ ಕುಂಬಾರ ಸಮಾಜದ ಮುಖಂಡ ನಾಣಯ್ಯ ಮಾತನಾಡಿ, ಸರ್ವಜ್ಞರ ಜ್ಞಾನವು ಪ್ರತಿಯೊಬ್ಬರಿಗೂ ಆದರ್ಶವಾದದ್ದು ಎಂದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ಧಾಳಿಯಿಂದ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಶಾಂತಿಗಾಗಿ ಮೌನಾಚರಣೆ ಮಾಡಲಾಯಿತು.

ತಹಶೀಲ್ದಾರ್ ಕುಸುಮ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ದರ್ಶನ ಕೆ.ಟಿ. ಸ್ವಾಗತಿಸಿದರು, ಮಂಜುನಾಥ್ ನಿರೂಪಿಸಿದರು. ನಗರಸಭೆ ಆಯುಕ್ತ ರಮೇಶ್ ವಂದಿಸಿದರು.