ಗೋಣಿಕೊಪ್ಪಲು, ಫೆ. 20: ಸಿದ್ದಾಪುರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮ ವಹಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಪ್ರಯತ್ನ ನಡೆಯಬಾರದು, ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಹಾಳು ಮಾಡದಂತೆ ಎಚ್ಚರ ವಹಿಸಬೇಕೆಂದು ರೈತ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೆಲ್ಲಿಹುದಿಕೇರಿಯ ಕೊಂಗೇರ ಬೋಪಯ್ಯ ಸಭಾಂಗಣದಲ್ಲಿ ನಡೆದ ಅಮ್ಮತ್ತಿ ಹೋಬಳಿ ಮಟ್ಟದ ಸಭೆಯಲ್ಲಿ ರೈತ ಸಂಘ ಈ ನಿರ್ಣಯ ಕೈಗೊಂಡಿದೆ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಧ್ಯಾ ಹತ್ಯೆ ಪ್ರಕರಣವನ್ನು ಖಂಡಿಸಲಾಯಿತು. ಅಲ್ಲದೆ ಸಂಧ್ಯಾಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.

ಯಾವದೇ ಕಾರಣಕ್ಕೂ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಂಡು ಅಸ್ಸಾಂ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆಸಬಾರದು.ಅನ್ಯೋನತೆಯಿಂದ ಇರುವ ರೈತರು ಹಾಗೂ ಕಾರ್ಮಿಕರ ನಡುವೆ ಒಡಕು ಉಂಟು ಮಾಡಬಾರದು; ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಶಾಂತಿಯಿಂದ ಇರುವ ಜಿಲ್ಲೆಯಲ್ಲಿ ಆಶಾಂತಿಗೆ ಎಡೆ ಮಾಡಿಕೊಡದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮನು ಸೋಮಯ್ಯ ಆಗ್ರಹಿಸಿದರು.

ಸಿದ್ದಾಪುರ ಸುತ್ತಮುತ್ತಲಿನ ರೈತರ, ಬೆಳೆಗಾರರ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆಯು ಕ್ರಮ ವಹಿಸಿದೆ. ರೈತರು ಕಾರ್ಮಿಕರು ಸಧ್ಯದ ಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ರೈತ ಸಂಘದ ನಿರಂತರ ಹೋರಾಟಕ್ಕೆ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಮನು ಸೋಮಯ್ಯ ವಿವರಿಸಿದರು. ಈ ಸಂದರ್ಭ ರೈತ ಸಂಘಕ್ಕೆ ನೂತನ ಸದಸ್ಯತ್ವ ನೋಂದಾವಣೆ ನಡೆಯಿತು. ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರಿಗೆ ವಿದ್ಯುತ್‍ಚ್ಛಕ್ತಿ ಅಡಚಣೆ ಬಗ್ಗೆ ಚೆಸ್ಕಾಂನ ಅಧಿಕಾರಿ ಸುರೇಶ್ ಅವರೊಂದಿಗೆ ಮಾತುಕತೆ ನಡೆಸಿ ವಿದ್ಯುತ್ ನಿಲುಗಡೆಯಾಗದಂತೆÉ ಕ್ರಮ ವಹಿಸಲು ಮನವಿ ಮಾಡಲಾಯಿತು.

ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ತೀತೀರ ಸಬಿತ, ಮುಖಂಡರಾದ ಮಂಡೇಪಂಡ ಪ್ರವೀಣ್, ಕೊಂಗೇರ ಗಪ್ಪು, ಕೆ.ಕೆ.ಕಿರಣ್ ಜೋಸೆಫ್, ಎಂ.ಪಿ.ಮಾಚಯ್ಯ, ಎಂ.ಸಿ.ಕುಶಾಲಪ್ಪ, ಡಿ.ಸಿ.ಬೋಪಣ್ಣ, ಕೆ.ಡಿ.ನಾಣಯ್ಯ, ಎಂ.ಸಿ.ತಮ್ಮಯ್ಯ, ಜಯಂತ್ ಚಿಣ್ಣಪ್ಪ, ಸೂರಜ್, ಸುನೀಲ್, ವಕೀಲ ಹೇಮಚಂದ್ರ ಸೇರಿದಂತೆ ಮುಂತಾದವರು ಹಾಜರಿದ್ದರು.

ಹೋಬಳಿಗೆ ಆಯ್ಕೆ : ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಮ್ಮತ್ತಿ ಹೋಬಳಿಯ ಸಂಚಾಲಕರಾಗಿ ಮಂಡೇಪಂಡ ಪ್ರವೀಣ್ ಅವರನ್ನು ಸಭೆಯ ತೀರ್ಮಾನದಂತೆ ಆಯ್ಕೆ ಮಾಡಲಾಯಿತು. ಕಳೆದ ಹಲವಾರು ವರ್ಷಗಳಿಂದ ಇವರು ರೈತ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

-ಹೆಚ್.ಕೆ.ಜಗದೀಶ್