ಮಡಿಕೇರಿ, ಫೆ.19 : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ರೂ. ಒದಗಿಸುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹ ರೈತರು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೋರಿದ್ದಾರೆ.

ಈ ಯೋಜನೆಯಡಿ 2 ಹೆಕ್ಟೇರ್‍ಗಿಂತ (5 ಎಕರೆಗಿಂತ ಕಡಿಮೆ) ಕಡಿಮೆ ಭೂ ಒಡೆತನ ಹೊಂದಿರುವ ಪ್ರತೀ ರೈತ ಕುಟುಂಬಗಳಿಗೆ ವಾರ್ಷಿಕವಾಗಿ ಒಟ್ಟು 6 ಸಾವಿರ ರೂ. ನೀಡಲು ಉದ್ದೇಶಿಸಲಾಗಿದ್ದು, ಅರ್ಹ ರೈತರ ಪಟ್ಟಿಗಳನ್ನು ಆಯಾಯ ಗ್ರಾಮ ಪಂಚಾಯಿತಿ ಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗು ವದು ಎಂದು ಅವರು ತಿಳಿಸಿದ್ದಾರೆ.

ಸಂಭವನೀಯ ಅರ್ಹ ರೈತರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಗೊಂಡಿರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರ ಅಥವಾ ಅಟಲ್ ಜನ ಸ್ಪಂದನ ಕೇಂದ್ರಕ್ಕೆ ತೆರಳಿ ಸ್ವಯಂ ಘೋಷಣೆಯನ್ನು ನೀಡಬಹು ದಾಗಿದೆ. ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದ ಅರ್ಹ ರೈತರು ನಿಗದಿತ ಅನುಬಂಧ ‘ಡಿ’ಯಲ್ಲಿ ತಮ್ಮ ವಿವರಗಳನ್ನು ನಮೂದಿಸಿ ಘೋಷಣೆ ಮಾಡಬಹುದಾಗಿದೆ.