ವೀರಾಜಪೇಟೆ, ಫೆ. 12: ಸಂತ ಅನ್ನಮ್ಮ ದೇವಾಲಯ ಹಾಗೂ ಲೂರ್ದ್ ಮಾತೆಯ ವಾರ್ಷಿಕ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಮೂರು ದಿನಗಳವರೆಗೆ ಆಚರಿಸಲಾಯಿತು.
ವಾರ್ಷಿಕ ಮಹೋತ್ಸವವು ತಾ:8ರಂದು ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಆರಂಭಗೊಂಡು ದಿವ್ಯ ಬಲಿಪೂಜೆ, ಜಪಸರ ವಿಶೇಷ ಪ್ರಾರ್ಥನೆ ಜರುಗಿತು. ತಾ,11 ರಂದು ಮೈಸೂರಿನ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ, ಕೆ.ಎ. ವಿಲಿಯಂ ಅವರಿಂದ ಸಂತ ಅನ್ನಮ್ಮ ದೇವಾಲಯದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು.
ಮಹೋತ್ಸವದ ಅಂಗವಾಗಿ ಕ್ರೈಸ್ತ ಬಾಂಧವರು ಹಾಗೂ ಭಕಾದಿಗಳು ಸಂತ ಅನ್ನಮ್ಮ ದೇವಾಲಯದಿಂದ ಮೇಣದ ಜ್ಯೋತಿ ಹಿಡಿದು ಲೂರ್ದ್ ಮಾತೆ ಹಾಗೂ ಸಂತ ಅನ್ನಮ್ಮ ಅವರ ವಿದ್ಯುತ್ ಅಂಲಕೃತ ಮಂಟಪ, ವಾದ್ಯಗೋಷ್ಠಿಯೊಂದಿಗೆ ದೇವರ ಕೀರ್ತನೆಗಳನ್ನು ಜಪಿಸುತ್ತ ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣ, ಗೋಣಿಕೊಪ್ಪ ರಸ್ತೆಯಿಂದ ಸಂತ ಅನ್ನಮ್ಮ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.
ಮೆರವಣಿಗೆ ಮತ್ತು ಗಾಯನ ಬಲಿಪೂಜೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದಲೈಮುತ್ತು, ಐಸಾಕ್ ರತ್ನಾಕರ, ಸಹಾಯಕ ಗುರು ರೋಷನ್ ಬಾಬು, ಹಾಗೂ ಕೊಡಗಿನ ವಿವಿಧೆಡೆಗಳ 30ಕ್ಕೂ ಹೆಚ್ಚು ಧರ್ಮಗುರುಗಳು ಭಾಗವಹಿಸಿದ್ದರು. ಮೆರವಣಿಗೆಯ ನಂತರ ರಾತ್ರಿ ಸಂತ ಅನ್ನಮ್ಮ ದೇವಾಲಯದಲ್ಲಿ ಪರಮಪ್ರಸಾದ ಸ್ವೀಕಾರ ಹಾಗೂ ಆಶೀರ್ವಚನ ನಡೆಯಿತು.