ಮಡಿಕೇರಿ, ಫೆ. 12: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ವಿವಿಧ ತಾಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 31 ರಂದು ಕೊಡಗು ಜಾನಪದ ಉತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ. ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ಅನಂತಶಯನ, ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಜಿಲ್ಲಾ ಜಾನಪದ ಪರಿಷತ್ ಮೂರು ತಾಲೂಕು ಘಟಕ, ಶನಿವಾರಸಂತೆ, ಸೋಮವಾರಪೇಟೆ, ಗೋಣಿಕೊಪ್ಪ, ಮೂರ್ನಾಡು ಸೇರಿದಂತೆ ಒಟ್ಟು ಏಳು ಘಟಕಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ ವಿವಿಧ ರೀತಿಯ ಜಾನಪದ ಕಲೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ರಾಜ್ಯ ಜಾನಪದ ಪರಿಷತ್ ಆಶಯದಂತೆ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಜಾನಪದ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದ್ದು ಮಾರ್ಚ್ 31 ರಂದು ಮಡಿಕೇರಿಯಲ್ಲಿ ಇಡೀ ದಿನ ಜಾನಪದಕ್ಕೆ ಸಂಬಂಧಿಸಿದಂತೆ ಉತ್ಸವದ ರೀತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು. ರಾಜ್ಯ ಜಾನಪದ ಪರಿಷತ್ ವತಿಯಿಂದ ಜಿಲ್ಲಾ ಜಾನಪದ ಪರಿಷತ್ ಆಯ್ಕೆ ಮಾಡಿದ ಹಿರಿಯ ಜಾನಪದ ಕಲಾವಿದರಿಗೆ ಪ್ರಶಸ್ತಿಯ ಗೌರವ ದೊರಕಿದ್ದು ಅಂತಹ ಕಲಾವಿದರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಜಾನಪದಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗೋಷ್ಠಿಗಳನ್ನೂ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊಡಗು ಜಾನಪದ ಉತ್ಸವದ ಸಂಚಾಲಕರಾಗಿ ಆಯ್ಕೆಯಾದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಮೂರು ವರ್ಷದ ನಂತರ ಕೊಡಗಿನಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಜರುಗಲಿದೆ. ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ. ಅಂತೆಯೇ ಕೊಡಗಿನಾದ್ಯಂತಲಿನ ಜಾನಪದೀಯ ಪರಿಕರಗಳ ವಿಶೇಷ ವಸ್ತು ಪ್ರದರ್ಶನ ಕೂಡ ಜಾನಪದ ಉತ್ಸವದ ಸಂದರ್ಭ ವಿಶೇಷ ಆಕರ್ಷಣೆಯಾಗಲಿದೆ. ಹಾಗೇ, ಜಾನಪದ ಮಳಿಗೆಗಳು, ಸ್ತ್ರೀಶಕ್ತಿ ಸಂಘಟನೆಗಳು ಉತ್ಪಾದಿಸಿದ ತಿನಿಸುಗಳು, ಉತ್ಪನ್ನಗಳಿಗೂ ಉತ್ಸವದಲ್ಲಿ ಮಳಿಗೆ ವ್ಯವಸ್ಥೆಗೊಳಿಸಲಾಗುತ್ತದೆ. ಜಿಲ್ಲಾ ಮಟ್ಟದ ಈ ಉತ್ಸವದಲ್ಲಿ ಎರಡು ಗಂಟೆಗಳ ಕಾಲ ವಿನೂತನವಾದ ಜಾನಪದ ನೃತ್ಯ, ಹಾಡುಗಳು ಕೂಡ ಪ್ರೇಕ್ಷಕರ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.(ಮೊದಲ ಪುಟದಿಂದ) ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮತ್ತು ವಿಚಾರಗೋಷ್ಠಿ ಸಮಿತಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲಾ ಜಾನಪದ ಕಲಾಸಕ್ತರೂ ಕೊಡಗು ಜಾನಪದ ಉತ್ಸವಕ್ಕೆ ಕೈಜೋಡಿಸಿ ಯಶಸ್ವಿಗೆ ಸಹಕರಿಸಬೇಕು ಎಂದರಲ್ಲದೇ ರಾಜ್ಯಮಟ್ಟದಿಂದಲೂ ಜಾನಪದ ವಿದ್ವಾಂಸರನ್ನು ಉತ್ಸವದ ಅಂಗವಾಗಿ ವಿಚಾರಗೋಷ್ಠಿಗೆ ಆಹ್ವಾನಿಸಲಾಗುತ್ತದೆ. ಸಂಸ್ಕøತಿ, ಪ್ರಕೃತಿ, ಮಹಿಳೆ ಸೇರಿದಂತೆ ಜಾನಪದದಲ್ಲಿ ಹಾಸ್ಯ ಮೊದಲಾದ ವಿಚಾರಗಳ ವಿಚಾರಗೋಷ್ಠಿಯೂ ಆಯೋಜಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಸಭೆಯಲ್ಲಿ ವೀರಾಜಪೇಟೆ ಜಾನಪದ ಪರಿಷತ್ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ, ಕಾರ್ಯದರ್ಶಿ ರಂಜಿತಾ ಕಾರ್ಯಪ್ಪ, ಸೋಮವಾರಪೇಟೆ ಜಾನಪದ ಪರಿಷತ್ ಕಾರ್ಯದರ್ಶಿ ರುಬಿನಾ, ಗೋಣಿಕೊಪ್ಪ ಹೋಬಳಿ ಘಟಕದ ನೂತನ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಕುಶಾಲನಗರ ಪರಿಷತ್ ಪ್ರತಿನಿಧಿ ಶಂಕರಯ್ಯ, ಮೂರ್ನಾಡು ಹೋಬಳಿ ಘಟಕದ ಕಾರ್ಯಾಧ್ಯಕ್ಷ ಕಿಗ್ಗಾಲು ಗಿರೀಶ್, ನಿರ್ದೇಶಕ ಹರೀಶ್ ಕಿಗ್ಗಾಲು ಮಾತನಾಡಿದರು.
ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್, ಉಪಾಧ್ಯಕ್ಷರುಗಳಾದ ಅಂಬೆಕಲ್ ಕುಶಾಲಪ್ಪ, ಮೊಣ್ಣಂಡ ಶೋಭಾ ಸುಬ್ಬಯ್ಯ, ಬಿ.ಕೆ. ರವೀಂದ್ರ ರೈ. ಪಿ.ಆರ್. ರಾಜೇಶ್, ಕಾರ್ಯದರ್ಶಿ ಉಜ್ವಲ್ ರಂಜಿತ್ ಸೇರಿದಂತೆ ಜಿಲ್ಲಾ, ತಾಲೂಕು, ಹೋಬಳಿ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೆಸರಾಂತ ಚಿತ್ರಕಲಾವಿದ ಬಿ.ಆರ್. ಸತೀಶ್ ರಚಿಸಿದ ಕೊಡಗು ಉತ್ಸವ ಸಂಬಂಧಿತ ಲೋಗೋವನ್ನೂ ಈ ಸಂದರ್ಭ ಅನಾವರಣಗೊಳಿಸಲಾಯಿತು.
ಸಂಚಾಲಕರಾಗಿ ಅನಿಲ್
ಮಾರ್ಚ್ 31 ರಂದು ಆಯೋಜಿತ ಕೊಡಗು ಜಾನಪದ ಉತ್ಸವದ ಸಂಚಾಲಕರನ್ನಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಅವರನ್ನು ಆಯ್ಕೆ ಮಾಡಲಾಯಿತು.
ಉತ್ಸವ ಸಮಿತಿ ಖಚಾಂಚಿಯಾಗಿ ಎಸ್.ಎಸ್. ಸಂಪತ್ ಕುಮಾರ್, ವಿಚಾರಗೋಷ್ಠಿ ಸಮಿತಿ ಸಂಚಾಲಕರಾಗಿ ಮುನೀರ್ ಅಹಮ್ಮದ್, ಸಾಂಸ್ಕøತಿಕ ಕಾರ್ಯಕ್ರಮ ಸಂಚಾಲಕರಾಗಿ ಕೆ. ಜಯಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಯಿತಲ್ಲದೇ, ವಸ್ತುಪ್ರದರ್ಶನ ಸಮಿತಿ ನೇತೃತ್ವವನ್ನು ಮೂರ್ನಾಡು ಹೋಬಳಿ ಪದಾಧಿಕಾರಿಗಳಿಗೆ ವಹಿಸಲಾಯಿತು.