ಸೋಮವಾರಪೇಟೆ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯನ್ನು ಇಲ್ಲಿಗೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ-ಕಲ್ಲಾರೆ ಹಾಗೂ ಚೌಡ್ಲು-ಆಲೆಕಟ್ಟೆ ಅಂಗನವಾಡಿ ಕೇಂದ್ರಗಳಲ್ಲಿ ಆಚರಿಸಲಾಯಿತು.
ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ ಜಂತುಹುಳು ನಾಶಕ ಮಾತ್ರೆಗಳನ್ನು ಅಂಗನವಾಡಿ ಮಕ್ಕಳಿಗೆ ನೀಡುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಗದಿತ ದಿನಗಳಲ್ಲಿ ಜಂತುಹುಳು ನಿವಾರಣೆಯ ಮಾತ್ರೆಗಳನ್ನು ನೀಡಬೇಕು. ಇದರಿಂದ ಅಪೌಷ್ಟಿಕತೆ ಹಾಗೂ ರಕ್ತ ಹೀನತೆಗೆ ಗುರಿಯಾಗುವದನ್ನು ತಪ್ಪಿಸಬಹುದಾಗಿದೆ ಎಂದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತರುಗಳಾದ ಬಿ.ಎಸ್. ಕಮಲ, ಎಸ್. ವನಜಾಕ್ಷಿ, ಆಶಾ ಕಾರ್ಯಕರ್ತೆಯರುಗಳಾದ ಸವಿತ, ಸಂದ್ಯಾ, ಸಹಾಯಕಿ ಮಮತಾ ಹಾಜರಿದ್ದರು.ಸಿದ್ದಾಪುರ: ಮಾಲ್ದಾರೆಯ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಉದ್ಘಾಟಿಸಿದರು. ಜಂತುಹುಳು ನಿವಾರಣೆ ಬಗ್ಗೆ ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್ ಹಾಗೂ ಮಾಲ್ದಾರೆಯ ವೈದ್ಯಾಧಿಕಾರಿ ಡಾ. ಸುಜಾತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಯ ಸದಸ್ಯರುಗಳು ಹಾಗೂ ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.