ಮಡಿಕೇರಿ, ಫೆ. 6: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಕ್ತದಾನದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅವರು ಮನುಷ್ಯನಿಗೆ ರಕ್ತದ ಅವಶ್ಯಕತೆ, ರಕ್ತದ ಮಹತ್ವ, ರಕ್ತದ ಗುಂಪುಗಳು, ರಕ್ತದಾನ ಮಾಡುವದರ ಮೂಲಕ ವ್ಯಕ್ತಿಯ ಜೀವವನ್ನು ಉಳಿಸುವಂತಹ ಅಮೂಲ್ಯವಾದ ಕೆಲಸವನ್ನು ಮಾಡುವಂತೆ ತಿಳಿಸಿದರು. ರಕ್ತದಾನ ಮಾಡಲು ಪಾಲಿಸಬೇಕಾದ ನಿಯಮ, ರಕ್ತದಾನ ಮಾಡಲು ಇರುವ ಅರ್ಹತೆಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕೆ.ಕೆ. ಮಹೇಶ್ ಅವರು ಸಮಾಜದ ಅಭಿವೃದ್ಧಿಗೆ ರಕ್ತದಾನ ಶ್ರೇಷ್ಠ ಕಾರ್ಯ. ಇಂದಿನ ಜನಾಂಗದ ಯುವಕ - ಯುವತಿಯರು ರಕ್ತದಾನ ಮಾಡುವದರಿಂದ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತೆಂದು ಹೇಳಿದರು.ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಸಂಚಾಲಕಿ ಬಿ. ನಮೀತಾ, ರೆಡ್ ರಿಬ್ಬನ್ ಕ್ಲಬ್‍ನ ಸಂಚಾಲಕಿ ಹೆಚ್.ಪಿ. ನಿರ್ಮಲ ಇದ್ದರು. ಕಾರ್ಯಕ್ರಮವನ್ನು ಯಶಸ್ವಿ ಮತ್ತು ತಂಡದವರು ನಡೆಸಿಕೊಟ್ಟರು. ಸ್ಮಿತ್ ಸ್ವಾಗತಿಸಿ, ಸಿ.ಜಿ. ಭವ್ಯ ವಂದಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.