ಮಡಿಕೇರಿ, ಫೆ.5 : ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲ ದೇವರ ಕಾಡಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಶಾಸಕರ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಬಿ.ಸಿ. ನಂಜಪ್ಪ, ಅಭ್ಯತ್‍ಮಂಗಲದ ಸರ್ವೆ ಸಂಖ್ಯೆ 10/1ರ ಅಯ್ಯಪ್ಪ ದೇವರ ಕಾಡು ಅತಿಕ್ರಮಣಗೊಂಡಿದೆ. ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಸೂಚನೆ ನೀಡುವದು ಅರಣ್ಯ ಕಾಯ್ದೆ ಮತ್ತು ನ್ಯಾಯಾಲಯಗಳ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ; ಇದನ್ನು ಆಧಾರವಾಗಿಸಿಕೊಂಡು ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮತ್ತು ಶಾಸಕ ಸ್ಥಾನ ಅನರ್ಹಗೊಳಿಸಲು ಕೂಡ ಕಾನೂನಿನಡಿ ಅವಕಾಶವಿದೆ. ಇದೇ ಕಾರಣಕ್ಕೆ ಟ್ರಸ್ಟ್ ಅಪ್ಪಚ್ಚು ರಂಜನ್ ಅವರಿಗೆ ನೋಟೀಸ್ ನೀಡಿ ಅರಣ್ಯ ಕಾಯ್ದೆ ಉಲ್ಲಂಘನೆಗಾಗಿ ಮತ್ತು ಅಧಿಕಾರಿಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ನಿಮ್ಮ ವಿರುದ್ಧ ಏತಕ್ಕೆ ಕಾನೂನು ಹೋರಾಟ ನಡೆಸಬಾರದೆಂದು ಪ್ರಶ್ನಿಸಿದೆ ಎಂದರು.

ಮುಂದಿನ 15 ದಿನಗಳ ಒಳಗೆ ಶಾಸಕರು ಬಹಿರಂಗವಾಗಿ ಕ್ಷಮೆ ಯಾಚಿಸಿ, ದೇವರ ಕಾಡಿನಲ್ಲಿ ಇನ್ನು ಮುಂದೆ ಯಾವದೇ ಅಕ್ರಮ, ನಿಯಮ ಬಾಹಿರ ಕಾರ್ಯಕ್ಕೆ ಮುಂದಾಗುವದಿಲ್ಲವೆಂದು ಈ ನೋಟೀಸ್‍ಗೆ ಲಿಖಿತ ಹೇಳಿಕೆ ನೀಡಬೇಕು. ತಪ್ಪಿದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.

ಬ್ರಹ್ಮಗಿರಿ ಪ್ರವೇಶ ನಿರ್ಬಂಧಿಸಿ

ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಕಿಡಿಗೇಡಿಗಳಿಂದ ಅಗ್ನಿ ಆಕಸ್ಮಿಕಗಳನ್ನು ತಡೆಯಲು ಪ್ರಮುಖ ಬೆಟ್ಟಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಡಾ. ಬಿ.ಸಿ. ನಂಜಪ್ಪ ಇದೇ ಸಂದರ್ಭ ಒತ್ತಾಯಿಸಿದರು. ಪವಿತ್ರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದ್ದು, ಈ ಬೆಟ್ಟ ಪ್ರವೇಶಿಸುವ ಕಿಡಿಗೇಡಿಗಳು ಅಗ್ನಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿರುವದರಿಂದ ಪ್ರವೇಶ ನಿರ್ಬಂಧಿಸಬೆÉೀಕೆಂದರು.

ತಲಕಾವೇರಿ ಮತ್ತು ಭಾಗಮಂಡಲ ದೇವಸ್ಥಾನ ಆಡಳಿತ ಮಂಡಳಿ ದೇವಾಲಯವನ್ನು ಮತ್ತು ಪಾವಿತ್ರ್ಯತೆಯನ್ನು ತಕ್ಕಡಿಯಲ್ಲಿ ವ್ಯಾಪಾರಕ್ಕೆ ಇಟ್ಟಿದೆ ಎನ್ನುವ ಅಭಿಪ್ರಾಯ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅರಣ್ಯಗಳಲ್ಲಿ ಅಗ್ನಿ ಅನಾಹುತಗಳು ಕಡಿಮೆಯಾಗಿಲ್ಲ. ತಡಿಯಂಡಮೋಳ್ ಬೆಟ್ಟಕ್ಕೆ ಕೂಡ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ ನಂಜಪ್ಪ, ಪ್ರತಿದಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಪ್ರವಾಸಿಗರಿಂದ ಹಣ ಪಡೆದು ಪ್ರವೇಶಾವಕಾಶ ನೀಡುತ್ತಿದ್ದಾರೆ, ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಪ್ರವೇಶವನ್ನು ನಿರ್ಬಂಧಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮುತ್ತಣ್ಣ, ಟ್ರಸ್ಟಿ ಎ.ವಿ. ಕಾರ್ಯಪ್ಪ ಹಾಗೂ ಗ್ರಾಮಸ್ಥ ಕೆ.ಎಂ. ರಂಜನ್ ಸುಬ್ಬಯ್ಯ ಉಪಸ್ಥಿತರಿದ್ದರು.