ಗೋಣಿಕೊಪ್ಪಲು, ಜ. 29: ಕೊಡಗಿನಲ್ಲಿ ಭೀಕರ ಜಲಪ್ರಳಯದ ಸಂದರ್ಭ ನೋಡ ನೋಡುತ್ತಲೇ ಹಟ್ಟಿಹೊಳೆಯ ಫ್ರಾನ್ಸಿಸ್ ಜಲಸಮಾಧಿ ಯಾಗಿ ಹೋದರು. ಇದೀಗ 6 ತಿಂಗಳು ಗತಿಸಿದರೂ ನೆರೆ ಸಂತ್ರಸ್ತರ ದುಃಖ ದುಮ್ಮಾನ ದೂರಾಗಲಿಲ್ಲ. ಇಂದು ಗೋಣಿಕೊಪ್ಪಲಿನ ಹರಿಶ್ಚಂದ್ರಪುರ ದಲ್ಲಿರುವ ವರ್ತಕರ ಸಂಘದ ವಾಣಿಜ್ಯ ಸಂಕೀರ್ಣ ಸಭಾಂಗಣದಲ್ಲಿ ಗೋಣಿಕೊಪ್ಪಲು ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಲಕ 12 ಮಂದಿ ಅರ್ಹ ಸಂತ್ರಸ್ತರಿಗೆ ತಲಾ ರೂ. 25 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು. ಇದೇ ಸಂದರ್ಭ ತನ್ನ ಪತಿಯ ದುರಂತ ಅಂತ್ಯದಿಂದ ಮನನೊಂದ ಫ್ಲೇವಿಯಾ ಜ್ಯೋತಿ ಇಂದು ಚೆಕ್ ಸ್ವೀಕರಿಸಿ, ಫ್ರಾನ್ಸಿಸ್ ಸಾವಿನ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ದೃಶ್ಯ ಮನಕಲಕಿತು. ಮರ್ಚೆಂಟ್ ಬ್ಯಾಂಕ್ ತನ್ನ ಲಾಭಾಂಶದ (ಡಿವಿಡೆಂಡ್) ಶೇ. 5ರಷ್ಟು ಮೊತ್ತ, ಬ್ಯಾಂಕ್‍ನಿಂದ ಒಂದು ಮೊತ್ತ, ಸಿಬ್ಬಂದಿವರ್ಗ ಹಾಗೂ ಫಿಗ್ಮಿ ಸಂಗ್ರಹಕಾರರಿಂದ ಒಟ್ಟು ರೂ. 3 ಲಕ್ಷ ಕ್ರೋಢೀಕರಿಸಿ ತಲಾ ರೂ. 25 ಸಾವಿರದಂತೆ ವಿತರಣೆ ಮಾಡ ಲಾಯಿತು. ಇದೇ ಸಂದರ್ಭ ಮಳೆ ಹಾನಿ ವಿಕೋಪಕ್ಕೆ ಸಿಲುಕಿದ್ದವರನ್ನು ರಕ್ಷಿಸಿದ ಮೂವರನ್ನು ಸನ್ಮಾನಿಸ ಲಾಯಿತು. ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್‍ಪೂಣಚ್ಚ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಜೀವಹಾನಿಗೊಂಡ, ಮನೆ –ತೋಟ ಕಳೆದುಕೊಂಡೀರುವ ಈ ಕೆಳಗಿನ 12 ಮಂದಿಗೆ ಚೆಕ್ ವಿತರಿಸಲಾಯಿತು.

ಮಾದಾಪುರ ಸಮೀಪ ಇಗ್ಗೋಡ್ಲು ಗ್ರಾಮದ ಜಿ.ಪಿ. ಕಾವೇರಪ್ಪ, ಇಗ್ಗೋಡ್ಲು ಗ್ರಾಮದ ಕೆ.ಎಸ್. ಪೆÇನ್ನಮ್ಮ, ಕಾಲೂರು ಗ್ರಾಮದ ಸಿ.ಎಂ. ಪೂಣಚ್ಚ, ಸೋಮವಾರಪೇಟೆ ಸಮೀಪ ಶಿರಂಗಳ್ಳಿ ಗ್ರಾಮದ ಪಿ.ಸಿ. ಚಂಗಪ್ಪ, ಹೆಮ್ಮೆತ್ತಾಳು ಗ್ರಾಮದ ಕೆ.ಟಿ. ಅನುಕುಲ, ಹೆಮ್ಮೆತ್ತಾಳು ಗ್ರಾಮದ ಅಯ್ಯಕುಟ್ಟೀರ ಎಂ. ಚಿಣ್ಣಪ್ಪ, ಮಾದಾಪುರ ಸಮೀಪ ಮೂವತ್ತೊಕ್ಲು ಗ್ರಾಮದ ಪಿ.ಎ. ತಂಗಮ್ಮ, ಮುಕ್ಕೋಡ್ಲು ಗ್ರಾಮದ ಕಾಳಚಂಡ ಯು. ರವಿತಮ್ಮಯ್ಯ, ಇಗ್ಗೋಡ್ಲು ಗ್ರಾಮದ ಎ.ಎನ್. ಸುರೇಶ್, ತಂತಿಪಾಲ ಮೇಘತ್ತಾಳು ಗ್ರಾಮದ ತಂಬುಕುತ್ತೀರ ಟಿ. ಪೂವಣ್ಣ, ಮಕ್ಕಂದೂರುವಿನ ಕೆ.ಜಿ. ಸುನಿಲ್ ಹಾಗೂ ಹಟ್ಟಿಹೊಳೆ ಹಾಡಗೇರಿ ಗ್ರಾಮದ ಪ್ಲೇವಿಯಾ ಜ್ಯೋತಿ ಅವರುಗಳು ಚೆಕ್ ಸ್ವೀಕರಿಸಿದರು.

ಏಕಗವಾಕ್ಷಿ ಯೋಜನೆ

ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿದ ಕೂರ್ಗ್ ಪಬ್ಲಿಕ್ ಶಾಲಾ ಸ್ಥಾಪಕ ಪ್ರಾಂಶುಪಾಲ ಪೆÇ್ರ. ಎಂ.ಡಿ. ನಂಜುಂಡ ಅವರು, ಜಲಪ್ರಳಯದಲ್ಲಿ ಸಿಲುಕಿ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಕಾರ್ಯ ಹಾಗೂ ವಸತಿ ನಿರ್ಮಾಣ ಕಾರ್ಯ ವಿಳಂಬ ವಾಗುತ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 100 ಕೋಟಿಗೂ ಅಧಿಕ ಪರಿಹಾರ ಮೊತ್ತ ಹರಿದುಬಂದಿದೆ. ಹಲವು ಸಂಘ ಸಂಸ್ಥೆಗಳು ಕೊಡಗು ಜಲಪ್ರಳಯ ಹಾಗೂ ನೆರೆಸಂತ್ರಸ್ತರ ನೆಪದಲ್ಲಿ ಸಾಕಷ್ಟು ನಿಧಿ ಸಂಗ್ರಹ ಮಾಡಿದೆ. ಈ ಹಣವೆಲ್ಲಾ ಎಲ್ಲಿಗೆ ಹೋಯಿತು? ಜಲಪ್ರಳಯದಲ್ಲಿ ಸಂತ್ರಸ್ತರು ಆಧಾರ್ ಕಾರ್ಟ್, ಐಡಿ ಕಾರ್ಡ್, ಆರ್.ಟಿ.ಸಿ. ಇತ್ಯಾದಿಗಳನ್ನು ಕಳೆದುಕೊಂಡಿರ ಬೇಕಾದರೆ ಇಂತಹವರನ್ನು ಗುರುತಿಸಿ ಮೊದಲು ದಾಖಲೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು.

ಇಂದು ಅರ್ಹರಿಗೆ ಪರಿಹಾರ ತಲಪುತ್ತಿಲ್ಲ ಎಂಬ ಆರೋಪವಿದ್ದು ಈ ನಿಟ್ಟಿನಲ್ಲಿ ಅರ್ಹ ಸಂತ್ರಸ್ತರನ್ನು ಗುರುತಿಸಿ ಮರ್ಚೆಂಟ್ ಬ್ಯಾಂಕ್ ನೀಡುತ್ತಿರುವ ಪರಿಹಾರವೂ ಅಮೂಲ್ಯ ವಾದದ್ದು ಎಂದು ಹೇಳಿದರಲ್ಲದೆ. ಕೊಡಗು ಜಲಪ್ರಳಯದಲ್ಲಿ ಸಿಲುಕಿದ ಅರ್ಹ ಸಂತ್ರಸ್ತರನ್ನು ಗುರುತಿಸಿ ಏಕಗವಾಕ್ಷಿ ಯೋಜನೆ ಮೂಲಕ ಜಿಲ್ಲಾಡಳಿತ ಪರಿಹಾರ ಕಾರ್ಯ ಕೈಗೊಳ್ಳುವಂತಾಗಬೇಕು. ಸಂತ್ರಸ್ತರಿಗೆ ಇಂದು ಬೇಕಾಗಿರುವದು ಸಂತಾಪವಲ್ಲ, ಸೂಕ್ತ ಸ್ಪಂದನ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್‍ಪೂಣಚ್ಚ ಅವರು, ಮಡಿಕೇರಿಯ ರೋಟೇರಿಯನ್, ವಕೀಲ ಕಿರಿಯಮಾಡ ರತನ್ ತಮ್ಮಯ್ಯ ಮೂಲಕ 12 ಮಂದಿ ಸಂತ್ರಸ್ತರನ್ನು ಆಯ್ಕೆ ಮಾಡಲಾಗಿದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಇರುವವರನ್ನು ಗುರುತಿಸಿ ಕಿರುಕಾಣಿಕೆ ನೀಡಲಾಗಿದೆ ಎಂದು ನುಡಿದರು. ಜಲಪ್ರಳಯ ಸಂದರ್ಭ ನೆರೆಪೀಡಿತರ ಕಷ್ಟಕ್ಕೆ ಧಾವಿಸಿದ ಮಡಿಕೇರಿ ವಕೀಲ ರತನ್ ತಮ್ಮಯ್ಯ, ಬಾಳೆಲೆಯ ಕೋದಂಡ ಸಂಪನ್ ಸೋಮಣ್ಣ ಮತ್ತು ಬಿಟ್ಟಂಗಾಲದ ಇಟ್ಟೀರ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಆಸ್ತಿಪಾಸ್ತಿ ಕಳೆದುಕೊಂಡವರ ಸರ್ವೆ ಕಾರ್ಯ ನೆನೆಗುದಿಗೆ ಬಿದ್ದಿದೆ, ಅರ್ಹರಿಗೆ ಪರಿಹಾರ ತಲಪುತ್ತಿಲ್ಲ, ಗೃಹ ನಿರ್ಮಾಣ ಕಾಮಗಾರಿ ಯಲ್ಲಿಯೂ ಸ್ಪಷ್ಟತೆ ಇಲ್ಲ ಎಂದು ಮುಕ್ಕೋಡ್ಲು ಕಾಳಚಂಡ ರವಿತಮ್ಮಯ್ಯ ಒಳಗೊಂಡಂತೆ ಸಂತ್ರಸ್ತರು ತಮ್ಮ ನೋವನ್ನು ಇದೇ ಸಂದರ್ಭ ತೋಡಿಕೊಂಡರು.

ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮರ್ಚೆಂಟ್ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಮಾದಪ್ಪ, ಉದ್ಯಮಿ ಅಜಿತ್ ಅಯ್ಯಪ್ಪ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಬ್ಯಾಂಕ್ ಉಸ್ತುವಾರಿ ಸಿಇಓ ಕಿರಣ್ ಬಿ.ಇ. ನಿರ್ದೇಶಕರಾದ ಕೆ.ಎಂ. ಸುಬ್ಬಯ್ಯ, ಎ.ಜೆ. ಬಾಬು, ಕೆ.ಆರ್. ಬಾಲಕೃಷ್ಣ ರೈ, ಉಮ್ಮರ್, ರೀನಾ, ಹೆಚ್.ಎನ್. ಮುರುಘ, ಕೇಶವ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತಿಸಿದರು. ಸುಮಿಸುಬ್ಬಯ್ಯ ಪ್ರಾರ್ಥನೆ ಮತ್ತು ಉಪಾಧ್ಯಕ್ಷ ಸುನಿಲ್‍ಮಾದಪ್ಪ ವಂದಿಸಿದರು.

-ಟಿ.ಎಲ್.ಎಸ್.