ಗೋಣಿಕೊಪ್ಪಲು, ಜ.29 : ತಿತಿಮತಿ ಸುತ್ತಮುತ್ತ ಕಾಡಾನೆ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಸೇರಿದಂತೆ ಪ್ರಾಣ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಅನೇಕ ಸಮಯಗಳಿಂದ ಆನೆ ಹಾವಳಿ ತಡೆಗಟ್ಟಲು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಇದರ ಫಲವಾಗಿ ತಿತಿಮತಿ ಭಾಗದಲ್ಲಿ ಅರಣ್ಯದಿಂದ ನಾಡಿಗೆ ಬರುವ ಆನೆಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್‍ನ್ನು ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆಯಲ್ಲಿ ಮಾರ್ಗ ಬದಲಾಯಿಸಿರುವ ಬಗ್ಗೆ ತೀವ್ರ ಸಂಶಯ ಮೂಡಿದ್ದು ಇದನ್ನು ಬಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ತಿತಿಮತಿಯ ಜಂಗಲಾಡಿಯ ಅರಣ್ಯದಂಚಿನಲ್ಲಿ ಅರಣ್ಯ ಹಿರಿಯ ಅಧಿಕಾರಿಗಳ ಬೇಜಾವಾಬ್ದಾರಿತನ ಬಗ್ಗೆ ಆಕ್ರೋಶ ಗೊಂಡು ಪ್ರತಿಭಟನೆ ನಡೆಸಿದರು.

ತಿತಿಮತಿ ಭಾಗದ ಚಾಮುಂಡಿ ದೇವಸ್ಥಾನದಿಂದ ಶ್ರೀರಾಮನ ಕಟ್ಟೆಗಾಗಿ ಜಂಗಲಾಡಿ ಕಾಲೋನಿ ಮುಖಾಂತರ ತಿತಿಮತಿ ಕೋಣನಕಟ್ಟೆ ಮುಖ್ಯ ರಸ್ತೆವರೆಗೆ ವನ್ಯ ಜೀವಿಗಳು ಸಮೀಪದ ಗ್ರಾಮಕ್ಕೆ ಬಾರದಂತೆ ರೈಲ್ವೇ ಬ್ಯಾರಿಕೇಡ್ ಅಳವಡಿಸುವಂತೆ ಇತ್ತೀಚೆಗೆ ತಿತಿಮತಿ ಅರಣ್ಯ ವಸತಿ ಗೃಹದಲ್ಲಿ ರೈತ ಸಂಘ ನಡೆಸಿದ ಪ್ರತಿಭಟನೆಯಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸಿ ರೈತರು ಸೂಚಿಸಿರುವ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರು.

ಆದರೆ ಅಧಿಕಾರಿಗಳು ಸೂಚಿಸಿ ರುವ ಮಾರ್ಗವನ್ನು ಹೊರತುಪಡಿಸಿ ತಮಗೆ ಇಷ್ಟ ಬಂದ ರೀತಿಯಲ್ಲಿ ಬ್ಯಾರಿಕೇಡ್ ಅಳವಡಿಸುತ್ತಿರುವದರಿಂದ ಈ ಭಾಗದ ರೈತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಅಲ್ಲದೆ ಸರ್ಕಾರದಿಂದ ಬಂದಿರುವ ಕೋಟ್ಯಾಂತರ ಅನುದಾನವು ಪೋಲಾಗುತ್ತಿದೆ. ಇವುಗಳ ಮಾರ್ಗವನ್ನು ತಕ್ಷಣ ಬದಲಾಯಿಸಿ ಕಾಡಾನೆಗಳು ಬರುವ ಮಾರ್ಗದಲ್ಲೇ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು, ಈಗಾದಲ್ಲಿ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಇದೇ ಮಾರ್ಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಮುಂದೆ ಪ್ರಾಣ ಹಾನಿಯಂತಹ ಅನಾಹುತಗಳು ಸಂಭವಿಸಿದಲ್ಲಿ ಇದರ ಹೊಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಿತಿಮತಿ ಜಂಗಲ್ ಹಾಡಿಯ ಸಮೀಪ ಜಮಾವಣೆಗೊಂಡಿದ್ದ ರೈತ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿದ ಹುಣಸೂರು ವನ್ಯ ಜೀವಿ ವಿಭಾಗದ ಎಸಿಎಫ್ ಪ್ರಸನ್ನ ಕುಮಾರ್‍ರವರು ರೈತರೊಂದಿಗೆ ಅರಣ್ಯದಲ್ಲಿ ಅಳವಡಿಸಲಾಗುತ್ತಿದ್ದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಶುಭಾಶ್‍ಸುಬ್ಬಯ್ಯ,ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ವಕ್ತಾರ ಚೆಪ್ಪುಡೀರ ಕಾರ್ಯಪ್ಪ,ಕೆಲವು ಅರಣ್ಯ ಇಲಾಖಾಧಿಕಾರಿಗಳ ಬೇಜಾವಾಬ್ದಾರಿ ತನದÀ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ, ಗ್ರಾಮಸ್ಥರಿಗೆ ಅನುಕೂಲ ವಾಗುವ ರೀತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು; ಇದರಲ್ಲಿ ಯಾವದೇ ಸಂಶಯಬೇಡ ಎಂದು ಪ್ರತಿಭಟನಕಾರರಿಗೆ ಎಸಿಎಫ್ ಪ್ರಸನ್ನ ಕುಮಾರ್‍ರವರು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪುಚ್ಚಿಮಾಡ ಅಶೋಕ್, ಸಿ.ಎಂ.ಬೆಳ್ಯಪ್ಪ, ಸಿ.ಎಂ. ಚಂಗಪ್ಪ, ಜೋಶ್, ರವಿ,ಸನ್ನಿ ಚಂಗಪ್ಪ, ಸಿ.ಪಿ.ಸೋಮಣ್ಣ, ಮಹೇಶ್, ಉಮೇಶ್, ಕಿರಣ್, ಪುಚ್ಚಿಮಾಡ ಸುನೀಲ್ ಇದ್ದರು. ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ಶಿವಾನಂದಾ, ಡಿ.ಆರ್.ಎಫ್‍ನ ಸತೀಶ್, ಶಿವ ಲಿಂಗಯ್ಯ ಮುಂತಾದವರು ಹಾಜರಿದ್ದರು. -ಹೆಚ್.ಕೆ.ಜಗದೀಶ್