ವೀರಾಜಪೇಟೆ, ಜ. 28: ವೀರಾಜಪೇಟೆ ಬಳಿಯ ಅರಮೇರಿ ಗ್ರಾಮದ ಕಾಡಿನಲ್ಲಿ ದೊರೆತ ಅಸ್ಸಾಂ ಯುವತಿ ಮಾರ್ಜಿನಾ ಕಾಟೂನ್ (20) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸರ ತನಿಖಾ ತಂಡ ಇಂದು ಬೆಳಗಿನಿಂದಲೇ ಅಸ್ಸಾಂ ರಾಜ್ಯದ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಹೆಗ್ಗೆಳ, ರಾಮನಗರ, ಕೆದಮುಳ್ಳೂರು, ದೇವಣಗೇರಿ, ಚಂಬೆಬೆಳ್ಳೂರು, ಅಮ್ಮತ್ತಿ, ನಾಪೋಕ್ಲು ಸೇರಿದಂತೆ ವಿವಿಧೆಡೆಗಳಲ್ಲಿ ಕೂಲಿ ಕಾರ್ಮಿಕರುಗಳನ್ನು ತಂಡದ ನಾಯಕರುಗಳನ್ನು ವಿಚಾರಣೆಗೊಳಪಡಿಸಿದ್ದು ತನಿಖೆ ಪ್ರಗತಿಯಲ್ಲಿರುವದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ನಾಪೋಕ್ಲು ಸಂತೆಯಲ್ಲಿ ಜಾಮೂನ್ ಪ್ಯಾಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಹದೀಮ್ ಆಲಿ ಎಂಬಾತನನ್ನು ತನಿಖಾ ತಂಡ ವಿಚಾರಣೆಗೊಳಪಡಿಸಿರುವದಾಗಿ ಹೇಳಲಾಗಿದೆ.

ಅಸ್ಸಾಂ ರಾಜ್ಯದ ಅನೇಕ ಮಂದಿ ಗಾರೆ ಕೆಲಸದ ಕಾರ್ಮಿಕರು ದಕ್ಷಿಣ ಕೊಡಗಿನ ವಿವಿಧೆಡೆಗಳಲ್ಲಿ ಹೊಸ ಕಟ್ಟಡ ನಿರ್ಮಾಣದಲ್ಲೂ ಕಾರ್ಮಿಕರಾಗಿ ದುಡಿಯುತ್ತಿದ್ದು ಈ ಕಾರ್ಮಿಕರುಗಳನ್ನು ಕೂಡ ತನಿಖಾ ತಂಡ ವಿಚಾರಣೆ ನಡೆಸಲಿರುವದಾಗಿ ತಿಳಿದುಬಂದಿದೆ.