ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ

ನವದೆಹಲಿ, ಜ. 29: ಮಾಜಿ ರಕ್ಷಣಾ ಸಚಿವ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ (88) ಅವರು ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು. ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ 1998 ರಿಂದ 2004 ರವರೆಗೆ ರಕ್ಷಣಾ ಸಚಿವರಾಗಿದ್ದರು. 2010ರವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ ಅವರು 2009-10ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ನಂತರ ಅನಾರೋಗ್ಯದ ಹಿನ್ನೆಲೆ ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದರು. ವಿ.ವಿ. ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಪರ್ಕ ಮತ್ತು ಕೈಗಾರಿಕಾ ಸಚಿವ ಹುದ್ದೆಗಳನ್ನು ಕೂಡ ಅಲಂಕರಿಸಿದ್ದರು. ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು. ಸಮತಾ ಪಕ್ಷದ ಸಂಸ್ಥಾಪಕರು. ತುರ್ತು ಪರಿಸ್ಥಿತಿ ವಿರೋಧಿ ಮತ್ತು ನಾಗರಿಕ ಹಕ್ಕುಗಳ ಹೋರಾಟ, ಸಮಾಜ ಸೇವೆಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಜಾರ್ಜ್ ಫರ್ನಾಂಡಿಸ್ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ 1997ರಿಂದ 1980ರವರೆಗೆ ಅಧಿಕಾರದಲ್ಲಿದ್ದಾಗಲೂ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಕಾರ್ಗಿಲ್ ಕಾಫಿನ್ ಗೇಟ್ ಹಗರಣ ವಿಚಾರದಲ್ಲಿ ಆರೋಪ ಕೇಳಿಬಂದ ಹಿನ್ನೆಲೆ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆಯೋಗದ ವಿಚಾರಣೆಯಿಂದ ಅವರು ಆರೋಪಮುಕ್ತರಾಗಿ ಹೊರಬಂದಿದ್ದರು.