ಮಡಿಕೇರಿ, ಜ.25: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಹುಣಸೂರು ಶಾಖೆಯಲ್ಲಿ ನೂತನವಾಗಿ ಅಳವಡಿಸಲಾಗಿರುವ ಆಧುನಿಕ ಕಾಫಿ ಸಂಸ್ಕರಣಾ ಯಂತ್ರೋಪಕರಣಕ್ಕೆ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಹಾಗೂ ನಿರ್ದೇಶಕರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಹುಣಸೂರು ನಗರದಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಕಾಫಿ ಸಂಸ್ಕರಣಾ ಘಟಕದಲ್ಲಿ ನೂತನವಾಗಿ ಆರಂಭಿಸಲಾಗಿರುವ ಕಾಫಿ ಸಂಸ್ಕರಣಾ ಯಂತ್ರೋಪಕರಣದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ತಿಳಿಸಿದರು. ಸಂಘವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರೂ. 58 ಲಕ್ಷ ವೆಚ್ಚದಲ್ಲಿ ಕಾಫಿ ಸಂಸ್ಕರಣಾ ಯಂತ್ರೋಪಕರಣ ಅಳವಡಿಸಲಾಗಿದೆ ಎಂದು ಎಂ.ಬಿ.ದೇವಯ್ಯ ಮಾಹಿತಿ ನೀಡಿದರು. ಸುಧಾರಿತ ಯಂತ್ರೋಪಕರಣ ಅಳವಡಿಕೆಯಿಂದ ಸಂಸ್ಕರಣೆ ಸಾಮಥ್ರ್ಯ 4 ಪಟ್ಟು ಹೆಚ್ಚಾಗಿದ್ದು, ಕಾರ್ಮಿಕರ ಬಳಕೆಯಲ್ಲಿ ಉಳಿತಾಯ, ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗಲಿದೆ. ಬೆಳೆಗಾರರಿಗೆ ನಿಗದಿತ ಅವಧಿಯಲ್ಲಿ ಕಾಫಿ ಸಂಸ್ಕರಣೆ ಮಾಡಿಕೊಡಲು ಸಾಧ್ಯವಾಗುವದು ಎಂದು ಅವರು ತಿಳಿಸಿದರು.

ಆಧುನಿಕ ಯಂತ್ರೋಪಕರಣದಲ್ಲಿ 200 ಚೀಲ ಕಾಫಿಯನ್ನು ಸಂಸ್ಕರಣೆ ಮಾಡಲು ಗರಿಷ್ಠ 2 ಗಂಟೆ ಸಾಕಾಗುತ್ತದೆ. ಇದರಿಂದ ಬೆಳೆಗಾರರು ಖುದ್ದಾಗಿ ನಿಂತು ಸಂಸ್ಕರಣಾ ಕಾರ್ಯ ಪರಿಶೀಲಿಸಬಹುದಲ್ಲದೆ, ತಮ್ಮ ಕಾಫಿಯ ಒಟ್ಟಾಗಿ ಇಳುವರಿಯನ್ನು ತಿಳಿದುಕೊಳ್ಳಬಹುದಾಗಿದ್ದು, ಇದರಿಂದ ಅವರ ಕಾಫಿ ಇಳುವರಿ ಆಧಾರದಲ್ಲಿ ಮಾರಾಟ ಬೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬೆಳೆಗಾರರು ನೀಡುವ ಕಾಫಿಯನ್ನು ಉದ್ದಿಮೆಯಲ್ಲಿ ಪ್ರತ್ಯೇಕವಾಗಿ ದಾಸ್ತಾನಿರಿಸಿ ಅವರುಗಳು ತಿಳಿಸುವ ದಿವಸ ಅವರ ಕ್ಷಮ ಕ್ಷಮದಲ್ಲಿ ಕಾಫಿ ಸಂಸ್ಕರಣೆ ಮಾಡಲಾಗುತ್ತದೆ. ಶುದ್ದ ಕಾಫಿಯನ್ನು ಧಾರಣೆಗನುಸಾರವಾಗಿ ನೇರವಾಗಿ ಅಥವಾ ಹರಾಜು ಕೇಂದ್ರದ ಮುಖಾಂತರ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವದು.

(ಮೊದಲ ಪುಟದಿಂದ) ಬೆಳೆಗಾರರು ಯಾವದೇ ಸಂದರ್ಭದಲ್ಲಿ ನಾವು ದಾಸ್ತಾನಿರಿಸಿದ ಕಾಫಿಯನ್ನು ಖುದ್ದಾಗಿ ಅಥವಾ ಅವರ ಅಧಿಕೃತ ವ್ಯಕ್ತಿಗಳ ಮುಖಾಂತರ ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಹಿಂದಿನ ಮೂರು ವರ್ಷದಿಂದ ಕಾಫಿ ಸಂಸ್ಕರಣಾ ಕಾರ್ಯದ ವೆಚ್ಚವನ್ನು ಟನ್ ಒಂದರ ಚೆರಿ ಕಾಫಿಗೆ ರೂ.3200 ಹಾಗೂ ಪಾರ್ಚ್ ಮೆಂಟ್ ಕಾಫಿಗೆ ರೂ. 3300 ನಿಗದಿಪಡಿಸಿದ್ದು, ಮುಂದಿನ ಅವಧಿಗೂ ಇದೇ ಧಾರಣೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಕೊಡಗು ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ಬಿ.ಡಿ.ಮಂಜುನಾಥ್ ಮಾತನಾಡಿ, ಸಂಘವು ಕೊಡಗಿನ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಆಧುನಿಕ ಕಾಫಿ ಸಂಸ್ಕರಣಾ ಯಂತ್ರ ಅಳವಡಿಸಿದ್ದು, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ. ಸಂಘದ ಸದಸ್ಯರು ಹಾಗೂ ಜಿಲ್ಲೆಯ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕ ಎನ್.ವಿ. ಅಯ್ಯಣ್ಣ, ಎಚ್.ಎ.ಬೊಳ್ಳ, ಹೊಸೂರು ರಮೇಶ್ ಜೋಯಪ್ಪ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಾರುಕಟ್ಟೆ ವ್ಯವಸ್ಥಾಪಕರಾದ ಎಂ.ಎ.ನಾಣಯ್ಯ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಡಿ.ಭಾಸ್ಕರ ಆಚಾರ್, ಇತರರು ಇದ್ದರು.