ಸೋಮವಾರಪೇಟೆ, ಜ. 23: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೀಡಾಗಿದ್ದ ಮಾದಾಪುರ ಕಲ್ಲುಕೋರೆ ಶ್ರೀ ಚೌಂಡಿಯಮ್ಮ ಮತ್ತು ಶ್ರೀ ಗುಳಿಗಪ್ಪ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾಗಿರುವ ದೇವಾಲಯ ಲೋಕಾರ್ಪಣೆ ಮತ್ತು ಹಿಂದೂ ಐಕ್ಯ ಸಮ್ಮೇಳನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಮಾದಾಪುರದಲ್ಲಿ ಶಾಂತಿಸಭೆ ನಡೆಸಲಾಯಿತು.
ತಾ. 27ರಂದು ಮಾದಾಪುರದಲ್ಲಿ ನಡೆಯಲಿರುವ ಶೋಭಾಯಾತ್ರೆ ಮತ್ತು ಹಿಂದೂ ಐಕ್ಯ ಸಮ್ಮೇಳನವನ್ನು ಶಾಂತಿ ಸೌಹಾರ್ದತೆಯಿಂದ ನಡೆಸುವಂತೆ ಡಿವೈಎಸ್ಪಿ ಮುರಳೀಧರ್ ಸೂಚಿಸಿದರು.
ಕಾರ್ಯಕ್ರಮದಲ್ಲಿ ಯಾವದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಮುರಳೀಧರ್ ತಿಳಿಸಿದರು.
ಮಾದಾಪುರದ ವಿಎಸ್ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ, ಎಎಸ್ಐ ಸುಂದರ್ ಸುವರ್ಣ, ಗ್ರಾ.ಪಂ. ಸದಸ್ಯರುಗಳಾದ ಸೋಮಪ್ಪ, ಮಜೀದ್, ದಿನೇಶ್, ಲತೀಫ್, ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜು, ಪ್ರಾರ್ಥನಾ ಮಂದಿರದ ಅಧ್ಯಕ್ಷ ಅಬ್ದುಲ್ ಗಫಾರ್, ಹಿಂದೂ ಜಾಗರಣಾ ವೇದಿಕೆಯ ಸುನಿಲ್, ಉಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ತಾ. 26 ರಿಂದ ಕಾರ್ಯಕ್ರಮ: ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಕಲ್ಲುಕೋರೆ ಶ್ರೀಚೌಂಡಿಯಮ್ಮ ಮತ್ತು ಶ್ರೀ ಗುಳಿಗಪ್ಪ ದೈವಸ್ಥಾನದಲ್ಲಿ ತಾ. 26ರಂದು ಪೂರ್ವಾಹ್ನ 7 ಗಂಟೆಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ,ಸುದರ್ಶನ ಹೋಮ, ರಾತ್ರಿ 7 ಗಂಟೆಗೆ ದೇವಿ ಪೂಜೆ, ಮಂಗಳಪೂಜೆ, ತಾ. 27ರಂದು ಪೂರ್ವಾಹ್ನ 7 ಗಂಟೆಗೆ ಗಣಪತಿ ಹೋಮ, 9.30ಕ್ಕೆ ಶ್ರೀದೇವಿ ಹಾಗೂ ದೈವದ ಪ್ರತಿಷ್ಠಾಪನೆ, ಸಂಜೆ 7 ಗಂಟೆಗೆ ದೇವಿಪೂಜೆ ಆಯೋಜಿಸಲಾಗಿದೆ.
ತಾ. 27ರಂದು ಬೆಳಗ್ಗೆ 10.30ಕ್ಕೆ ಗರ್ವಾಲೆ ರಸ್ತೆಯ ಕಲ್ಲುಕೋರೆ ದೇವಸ್ಥಾನದಿಂದ ಮಾದಾಪುರ ಎಸ್ಜೆಎಂ ಶಾಲಾ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, 11.30ಕ್ಕೆ ಶಾಲಾ ಮೈದಾನದಲ್ಲಿ ಹಿಂದೂ ಐಕ್ಯ ಸಮ್ಮೇಳನ ಆಯೋಜಿಸಲಾಗಿದೆ.
ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಹಿಂದೂ ಐಕ್ಯ ವೇದಿಕೆಯ ಕೇರಳ ರಾಜ್ಯದ ಪ್ರಧಾನ ಕಾರ್ಯದರ್ಶಿ ಡಾ. ಬ್ರಹ್ಮಚಾರಿ ಭಾರ್ಗವರಾಮ್, ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ, ಕಾಫಿ ಬೆಳೆಗಾರ ಎಂ.ಬಿ. ಮಧು ಬೋಪಣ್ಣ, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಟಿ. ಸುಭಾಷ್ ತಿಮ್ಮಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.