ಶನಿವಾರಸಂತೆ, ಜ. 23: ಫೈನಾನ್ಸ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿ ವ್ಯಕ್ತಿಯೊಬ್ಬರು 15 ದಿನಗಳಿಂದ ತಲೆಮರೆಸಿಕೊಂಡಿರುವ ಘಟನೆ ಸಮೀಪದ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಕೊಡ್ಲಿಪೇಟೆಯ ನಿವಾಸಿ ಅಶ್ವಥ್ ಎಂಬವರು ಶನಿವಾರಸಂತೆಯಲ್ಲಿ ಚಾಲುಕ್ಯ ಫೈನಾನ್ಸ್ ಎಂಬ ಹೆಸರಿನಲ್ಲಿ ಹಣ ಹೂಡಿಕೆಯ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಚೀಟಿ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ಶನಿವಾರಸಂತೆ - ಕೊಡ್ಲಿಪೇಟೆ ಸುತ್ತಮುತ್ತಲ ಗ್ರಾಮಗಳಲ್ಲಿ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದ್ದು, ಹಣ ಕಳೆದುಕೊಂಡ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 100 ಮಂದಿ ಹಣ ಹೂಡಿಕೆ ಮಾಡಿದ್ದು, ಅಶ್ವಥ್‍ರ ಕೊಡ್ಲಿಪೇಟೆ ಮನೆ ಬಳಿ ಬಂದು ವಿಚಾರಿಸತೊಡಗಿದ್ದಾರೆ. ಪತ್ನಿಯನ್ನು ವಿಚಾರಿಸಿದರೆ ತನಗೇನೂ ತಿಳಿಯದು ತನ್ನಿಂದಲೂ ಹಣ ಪಡೆದಿದ್ದು, ಎಲ್ಲೋ ಹೋಗಿದ್ದಾರೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ರೂ. 1.5 ಲಕ್ಷದ ಚೀಟಿ ವ್ಯವಹಾರಗಳನ್ನೂ ನಡೆಸುತ್ತಿದ್ದ ಅಶ್ವಥ್ ಇದೀಗ ವಂಚಿಸಿ ತಲೆಮರೆಸಿಕೊಂಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.