ಮಡಿಕೇರಿ, ಜ. 23: ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ವಶಕ್ಕೊಪ್ಪಿಸಲಾಗಿದೆ.
ಶನಿವಾರಸಂತೆ ನಿವಾಸಿ ಮಣಿ ಎಂಬವರು ತಮ್ಮ ಪುತ್ರಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಬಗ್ಗೆ 20.7.2017ರಂದು ದೂರು ನೀಡಿದ್ದರು. ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರು ಪ್ರಕರಣವನ್ನು ಸೆನ್ ವಿಶೇಷ ಠಾಣೆಗೆ ವಹಿಸಿದ್ದರು. ವಿಶೇಷ ಠಾಣೆಯ ಪೊಲೀಸ್ ನಿರೀಕ್ಷಕ ಹರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಕ್ಲೆಮೆಂಟ್ ಸಾಲ್ಡಾನ, ಪ್ರಕಾಶ್ ಹಾಗೂ ಕಾರ್ಯಪ್ಪ ಅವರುಗಳು ಮಾಹಿತಿ ಸಂಗ್ರಹಿಸಿ ಬಾಲಕಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸರಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿರುವದನ್ನು ಪತ್ತೆ ಹಚ್ಚಿದ್ದಾರೆ. ಆಕೆಯನ್ನು ವಿಚಾರಿಸಲಾಗಿ ತನ್ನನ್ನು ಯಾರೂ ಅಪಹರಣ ಮಾಡಿಲ್ಲ. ತಾನೇ ತಂದೆ, ಅಣ್ಣನಿಗೆ ಹೇಳದೆ ಮನೆ ಬಿಟ್ಟು ಬಂದಿರುವದಾಗಿ ಹೇಳಿಕೆ ನೀಡಿದ ಮೇರೆಗೆ ಆಕೆಯನ್ನು ತಂದೆಯ ವಶಕ್ಕೊಪ್ಪಿಸಲಾಗಿದೆ.