ನಾಪೆÇೀಕ್ಲು, ಜ. 10: ರಾಜ್ಯ ಸರಕಾರ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡುವದಾಗಿ ಘೋಷಿಸಿದ್ದು, ಈಗ ಮೀನಾಮೇಷ ಎಣಿಸುತ್ತಿದೆ. ಕೂಡಲೇ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ನಾಪೆÇೀಕ್ಲು ಹೋಬಳಿ ಬಿಜೆಪಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಎಚ್ಚರಿಸಿದ್ದಾರೆ.

ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾಪೆÇೀಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 570 ರೈತರು ಸಾಲ ಪಡೆದಿದ್ದು, ಇವರಲ್ಲಿ ಕೇವಲ 300 ರೈತರನ್ನು ಸಾಲ ಮನ್ನಾಕ್ಕೆ ಆಯ್ಕೆಗೊಳಿಸಲಾಗಿದೆ. ಇನ್ನುಳಿದ 270 ಜನ ರೈತರನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ಸಂಘದಲ್ಲಿ ವಿಚಾರಿಸಿದಾಗ ಅವರ ದಾಖಲಾತಿಗಳಲ್ಲಿ ಸಣ್ಣಪುಟ್ಟ ನ್ಯೂನ್ಯತೆ ಇರುವದರಿಂದ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ನ್ಯೂನ್ಯತೆಯನ್ನು ಸರಿಪಡಿಸು ವವರಾರು? ರೈತರಿಂದ ದಾಖಲಾತಿ ಪಡೆಯುವಾಗ ಸರಿಯಾದ ದಾಖಲಾತಿಯನ್ನು ಪಡೆಯುವದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜವಾಬ್ದಾರಿ ಅಲ್ಲವೇ? ಎಂದು ಪ್ರಶ್ನಿಸಿದರು.

ಆದುದರಿಂದ ಕೂಡಲೇ ಜಿಲ್ಲಾ ಸಹಕಾರಿ ಯೂನಿಯನ್ ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿ ಎಲ್ಲಾ ಸಾಲಗಾರರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಸರಕಾರ ರೈತರ ಸಾಲ ಮನ್ನಾ ಮಾಡುವ ನೆಪದಲ್ಲಿ ಪೆಟ್ರೋಲ್, ಡೀಸೆಲ್, ವಾಹನ ತೆರಿಗೆ ಸೇರಿದಂತೆ ಎಲ್ಲಾ ರೀತಿಯಲ್ಲೂ ರೈತರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ ಅವರು ಕೂಡಲೇ ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‍ನ ಸಾಲ ಮನ್ನಾದ ಬಗ್ಗೆ ನಿಖರವಾದ ಮಾಹಿತಿಯನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸ್ಥಳೀಯ ರೈತರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್, ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ ಇದ್ದರು.