ಕೂಡಿಗೆ, ಜ. 5: ರಾಜ್ಯ ಹೆದ್ದಾರಿ ಮೂಲಕ ಸೋಮವಾರಪೇಟೆಗೆ ಸಂಪರ್ಕ ಹೊಂದಿರುವ ಹೆಬ್ಬಾಲೆ-ಬಾಣವಾರ ರಸ್ತೆಯು ಹದಗೆಟ್ಟಿದ್ದು, ಆದಷ್ಟು ಬೇಗನೆ ರಸ್ತೆಯನ್ನು ಸರಿಪಡಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ನಾಲ್ಕೈದು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಹೆಬ್ಬಾಲೆ, ಬಾಣವಾರ, ಸಕಲೇಶಪುರಕ್ಕೆ ಭಾರೀ ವಾಹನಗಳ ಓಡಾಟದ ಹಿನ್ನೆಲೆ ಅಲ್ಪಸ್ವಲ್ಪ ಸರಿಯಿದ್ದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ.

ಈ ರಸ್ತೆಯಲ್ಲಿ ದಿನಂಪ್ರತಿ ಸೋಮವಾರಪೇಟೆಗೆ ತೆರಳುವ ಖಾಸಗಿ ಬಸ್ ಸೇರಿದಂತೆ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರ ಹಾಗೂ ಪಶುಪಾಲನೆ ಇಲಾಖೆಯ ರಾಜ್ಯಮಟ್ಟದ ವನ್ಯಜೀವಿ ಸಂಶೋಧನಾ ಕೇಂದ್ರವು ಈ ವ್ಯಾಪ್ತಿಯಲ್ಲಿದ್ದು, ದಿನಂಪ್ರತಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುವ ಮುಖ್ಯ ರಸ್ತೆಯಾಗಿದೆ. ರಸ್ತೆಯು ಸಂಚರಿಸಲು ಯೋಗ್ಯವಿಲ್ಲದ ಕಾರಣ ಸಂಬಂಧಪಟ್ಟ ಇಲಾಖೆಯವರು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.