ಗೋಣಿಕೊಪ್ಪಲು, ಜ.2: ಇಲ್ಲಿನ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭ ಸಮಾರೋಪ ಭಾಷಣ ಮಾಡಿದ ಕೊಡಗು ಜಿಲ್ಲಾ ಕಾರ್ಯ ನಿರತ ಪರ್ತಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್‍ಎಸ್‍ಎಸ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸೇವಾ ಮನೋಭಾವನೆಯನ್ನು ಶಿಬಿರಕ್ಕಷ್ಟೆ ಸೀಮಿತಗೊಳಿಸದೇ ಜೀವನದುದ್ದಕ್ಕೂ ಅಳವಡಿಸಿಕೊಳ್ಳ ಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಮಾತನಾಡಿ ವಿದ್ಯಾರ್ಥಿಗಳು ಮೂಢನಂಬಿಕೆಗಳಿಗೆ ಮಾರು ಹೋಗದೆ ವೈಜ್ಞಾನಿಕ ಮನೋಭಾವನೆ ಯನ್ನು ಬೆಳೆಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಬೇಗೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಕೇಚೆಟ್ಟಿರ ಬಿ. ಅಪ್ಪಯ್ಯ ಹಾಗೂ ಬೇಗೂರಿನ ದಾನಿಗಳಾದ ಮಲ್ಲಂಡ ಎನ್. ಗೌರಮ್ಮ ಇವರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮೀಣ ಕ್ರೀಡೆಗಳಾದ ಕುಂಟಬಿಲ್ಲೆ ಆಟದಲ್ಲಿ ಅನಿತಾ ಕುಮಾರಿ ತಂಡ ಪ್ರಥಮ, ಪೂಜಾ ತಂಡ ದ್ವಿತೀಯ ಸ್ಥಾನ, ಮಹಿಳೆಯರ ಗೋಣಿಚೀಲ ಓಟದಲ್ಲಿ ಮತ್ರಂಡ ಕ್ರಿಶ್ಮ ಪ್ರಥಮ, ಕೇಚೆಟ್ಟಿರ ಭಾವನ ದ್ವಿತೀಯ ಸ್ಥಾನ, ಪುರುಷರ ವಿಭಾಗದಲ್ಲಿ ಮತ್ರಂಡ ಕಾರಿಯಪ್ಪ ಪ್ರಥಮ, ಚೋಡುಮಾಡ ಗಗನ್ ದ್ವಿತೀಯ ಸ್ಥಾನ ವಾಲಿಬಾಲ್‍ನಲ್ಲಿ ಬೇಗೂರು ಮಹಾವಿಷ್ಣು ತಂಡ ಪ್ರಥಮ, ಭಗತ್ ಸಿಂಗ್ ತಂಡ ದ್ವಿತೀಯ ಸ್ಥಾನ, ಬಸ್ಸಿನ ಹುಡುಕಾಟ ಸ್ಪರ್ಧೆಯಲ್ಲಿ ಸುಮತಿ ಪ್ರಥಮ, ಬೇಗೂರು ಶಾಲಾ ವಿದ್ಯಾರ್ಥಿ ಅಮೂಲ್ಯ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಜಸ್ಮಿ ತಂಡ ಪ್ರಥಮ, ಪ್ರೇಮ ತಂಡ ದ್ವಿತೀಯ ಸ್ಥಾನ, ಪುರುಷರ ವಿಭಾಗದಲ್ಲಿ ಮಂಜುನಾಥ್ ತಂಡ ಪ್ರಥಮ, ಸುಬ್ರಮಣಿ ತಂಡ ದ್ವಿತೀಯ ಸ್ಥಾನ, ಲಗೋರಿಯಲ್ಲಿ ಅಪ್ಪಣ್ಣ ತಂಡ ಪ್ರಥಮ, ಲಾವಣ್ಯ ತಂಡ ದ್ವಿತೀಯ ಸ್ಥಾನ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೇಚೆಟ್ಟಿರ ಅಪ್ಪಣ್ಣ ಪ್ರಥಮ, ಮತ್ರಂಡ ಕಿಶೋರ್ ದ್ವಿತೀಯ ಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ ಮತ್ರಂಡ ಕುಟುಂಬ ಪ್ರಥಮ ಹಾಗೂ ಅರಮಣಮಾಡ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.

ಕಾವೇರಿ ಕಾಲೇಜು ಪ್ರಾಂಶುಪಾಲೆ ಎಸ್.ಆರ್. ಉಷಾಲತ, ಹುದಿಕೇರಿ ಗ್ರಾ.ಪಂ. ಸದಸ್ಯ ಮತ್ರಂಡ ಸೋಮಣ್ಣ, ಕಾಕಮಾಡ ಚಂಗಪ್ಪ, ಬೇಗೂರು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಕೆ.ಯು. ದಮಯಂತಿ, ಬೇಗೂರು ಈಶ್ವರ ಸ್ವ ಸಹಾಯ ಸಂಘದ ಆಧ್ಯಕ್ಷ ಮತ್ರಂಡ ರಾಜಾ ಮುತ್ತಪ್ಪ, ಕೇಚೆಟ್ಟಿರ ಎನ್. ಅಪ್ಪಣ್ಣ, ಬೇಗೂರು ಶಾಲೆಯ ಮುಖ್ಯ ಶಿಕ್ಷಕಿ ಎಸ್. ಸುಜಾತ, ಎನ್.ಎಸ್.ಎಸ್. ಅಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಹಾಗೂ ಎನ್.ಪಿ. ರೀತಾ, ಬೇಗೂರು ಶಾಲಾ ಶಿಕ್ಷಕಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.