ಮಡಿಕೇರಿ, ಡಿ. 27: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯ ಆರು ಸಂತ್ರಸ್ತ ಕುಟುಂಬಗಳಿಗೆ ಮಣವಟ್ಟಿರ ಕುಟುಂಬಸ್ಥರು ತಲಾ 10 ಸಾವಿರ ರೂ.ಗಳಂತೆ ಒಟ್ಟು 60 ಸಾವಿರ ರೂ.ಗಳನ್ನು ನಗರದಲ್ಲಿ ವಿತರಿಸಿದರು.

ಮಣವಟ್ಟಿರ ಸುಬ್ರಮಣಿ ಅವರು ನೀಡಿರುವ 30 ಸಾವಿರ ರೂ. ಸೇರಿದಂತೆ ಕುಟುಂಬದ ಸದಸ್ಯರಿಂದ ಸಂಗ್ರಹಿಸಿದ ಒಟ್ಟು ಮೊತ್ತವನ್ನು ಕೃಷ್ಣರಾವ್, ಅಲ್ಮಚಂಡ ಪ್ರಭು ಮತ್ತು ಶೈಲ, ಚೆನ್ನಪಂಡ ಸರಸು, ಅಯ್ಯಕುಟ್ಟಿರ ಪೆಮ್ಮಯ್ಯ, ಐಮುಡಿಯಂಡ ಶಾರದ ಹಾಗೂ ಮಡ್ಲಂಡ ಲವ ಅವರಿಗೆ ವಿತರಿಸಲಾಯಿತು.

ಮಣವಟ್ಟಿರ ಕುಟುಂಬದ ಪ್ರಮುಖರಾದ ಪಾಪು ಚೆಂಗಪ್ಪ ಮಾತನಾಡಿ, ಕಾವೇರಿ ನಾಡು ಕೊಡಗಿನಲ್ಲಿ ಮಹಾ ಮಳೆಯಿಂದ ನಡೆಯಬಾರದ್ದು ನಡೆದು ಹೋಗಿದೆ. ಈ ಅನಾಹುತದಿಂದ ಪ್ರಾಣಹಾನಿ ಮಾತ್ರವಲ್ಲದೆ ಮನೆ, ಜಮೀನು, ಗದ್ದೆ, ತೋಟಗಳು ನೆಲಕಚ್ಚಿವೆ. ಸಂಕಷ್ಟದ ಬದುಕು ಸಾಗಿಸುತ್ತಿರುವ ಸಂತ್ರಸ್ತರಿಗೆ ನೆರವಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಣವಟ್ಟಿರ ಕುಟುಂಬಸ್ಥರು ಅಳಿಲಿನ ಸೇವೆಯಂತೆ ಧನ ಸಹಾಯ ಮಾಡಿರುವದಾಗಿ ತಿಳಿಸಿದರು.

ಅತಿವೃಷ್ಟಿ ಹಾನಿಗೆ ಸಿಲುಕಿ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿರುವ ಸಂತ್ರಸ್ತರ ಸ್ಥಿತಿ, ಗತಿಯ ಬಗ್ಗೆ ನೋವಿದ್ದು, ಪ್ರತಿಯೊಬ್ಬರು ಸ್ಪಂದಿಸುವ ಅಗತ್ಯವಿದೆ ಎಂದು ಪಾಪು ಚೆಂಗಪ್ಪ ತಿಳಿಸಿದರು.

ಮಣವಟ್ಟಿರ ಕುಟುಂಬದ ಅಧ್ಯಕ್ಷ ಗಣೇಶ್ ಅಯ್ಯಪ್ಪ, ಕಾರ್ಯದರ್ಶಿ ಅರುಣ್ ಪಳಂಗಪ್ಪ, ಸದಸ್ಯರಾದ ಪಾಪು ಚೆಂಗÀಪ್ಪ, ಸುಜಿತ್ ಚಿಣ್ಣಪ್ಪ, ಸುಬ್ರಮಣಿ, ವಸಂತ್ ಉತ್ತಪ್ಪ ಹಾಗೂ ಹರೀಶ್ ಕುಶಾಲಪ್ಪ ಮತ್ತಿತರರು ಈ ಸಂದರ್ಭ ಹಾಜರಿದ್ದರು.