ಸೋಮವಾರಪೇಟೆ, ಡಿ. 25: ಜಿಲ್ಲೆಯ ಇತರ ಪ.ಪಂ.ಗಳಿಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆ ಯನ್ನು ಹೊಂದಿರುವ ಸೋಮವಾರ ಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕ ಸೇವೆಗೆ ನಿಯೋಜಿತ ರಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಖ್ಯೆಯಲ್ಲೂ ಕೊರತೆ ಇರುವದು ಕಂಡುಬಂದಿದೆ.
ಕಳೆದ ಏಳೆಂಟು ವರ್ಷಗಳಿಂದ ಈ ‘ಕೊರತೆ’ ಮುಂದುವರೆದು ಕೊಂಡೇ ಬಂದಿದ್ದು, ಇರುವ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಅಧಿಕವಾಗುತ್ತಿದೆ. ಪರಿಣಾಮ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ನಿರೀಕ್ಷಿತ ಸೇವೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರೊಂದಿಗೆ ಪಟ್ಟಣ ಪಂಚಾ ಯಿತಿಯ ಕೆಲಸ ಕಾರ್ಯಗಳೂ ಮಂದಗತಿಯಲ್ಲಿ ನಡೆಯುತ್ತಿದ್ದು, ವಿವಿಧ ಮೂಲಗಳಿಂದ ಬರುವ ಕಂದಾಯವನ್ನೂ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗುವಂತಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಳೆದ 4 ವರ್ಷದಿಂದ ಕಂದಾಯ ನಿರೀಕ್ಷಕರೇ ಇಲ್ಲವಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿರುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಕೊರತೆ ಬಗ್ಗೆ ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವರದಿ ರವಾನೆಯಾಗು ತ್ತಿದ್ದರೂ ಯಾವದೇ ಸ್ಪಂದನೆ ಇಲ್ಲವಾಗಿದೆ. ಪರಿಣಾಮ ಪಂಚಾಯಿತಿಯ ಅಭಿವೃದ್ಧಿಯಲ್ಲೂ ಹಿಂದೆ ಬೀಳುವಂತಾಗಿದೆ.
ಸೋಮವಾರಪೇಟೆ ಪ.ಪಂ.ನಲ್ಲಿ ಜೂನಿಯರ್ ಇಂಜಿನಿಯರ್ 1 ಹುದ್ದೆ ಕಳೆದ 8 ವರ್ಷಗಳಿಂದ ಖಾಲಿ ಉಳಿದಿದೆ. ದ್ವಿತೀಯ ದರ್ಜೆ ಸಹಾಯಕರು-2 ಹುದ್ದೆ, ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್-1 ಹುದ್ದೆ ಭರ್ತಿಯಾಗದೇ ಇದ್ದರೆ, ಕಳೆದ 4 ವರ್ಷದಿಂದ ಕಂದಾಯ ನಿರೀಕ್ಷಕರೇ ಇಲ್ಲಿ ಇಲ್ಲವಾಗಿದ್ದಾರೆ.
ಇದರೊಂದಿಗೆ ಕಳೆದ 7 ವರ್ಷದಿಂದ ಬಿಲ್ಕಲೆಕ್ಟರ್, ಕಳೆದ 10 ವರ್ಷದಿಂದ ಸಮುದಾಯ ಸಂಘಟಕರು, ಪಂಪ್ ಆಪರೇಟರ್, ಉಪ ಪಂಪ್ ಆಪರೇಟರ್, ಸ್ಯಾನಿಟರಿ ಸೂಪರ್ವೈಸರ್, ಸೀನಿಯರ್ ವಾಲ್ಮೆನ್ ಹುದ್ದೆಗಳು ಖಾಲಿ ಉಳಿದಿವೆ. ಇಲ್ಲಿಗೆ ನಿಯುಕ್ತಿ ಗೊಂಡಿರುವ 15 ಪೌರ ಕಾರ್ಮಿಕರ ಪೈಕಿ 5 ಕಾರ್ಮಿಕರ ಹುದ್ದೆ ಭರ್ತಿಯಾಗದೇ ಉಳಿದಿದೆ. ಇದರೊಂದಿಗೆ ಖಾಯಂ ಚಾಲಕ ಹುದ್ದೆಯೂ ಭರ್ತಿಯಾಗಿಲ್ಲ.
ಇದುವರೆಗೂ ಆರೋಗ್ಯ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಉದಯಕುಮಾರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿದ ನಂತರ ಆ ಸ್ಥಾನಕ್ಕೆ ಇದುವರೆಗೂ ಯಾರನ್ನೂ ನೇಮಿಸಿಲ್ಲ. ಜೂನಿಯರ್ ಇಂಜಿನಿಯರ್ ಹುದ್ದೆ ಖಾಲಿ ಉಳಿದಿದ್ದು, ಜಿ.ಪಂ. ಅಭಿಯಂತರ ವೀರೇಂದ್ರ ಅವರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.
ಪಟ್ಟಣಕ್ಕೆ ದುದ್ದುಗಲ್ಲು, ಹಾರಂಗಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದ್ದು, ದುದ್ದುಗಲ್ಲು, ಹಾರಂಗಿ, ಯಡವ ನಾಡು, ಬೇಳೂರಿನಲ್ಲಿ ಪಂಪ್ಹೌಸ್, ಪಟ್ಟಣದಲ್ಲಿ ಫಿಲ್ಟರ್ ಹೌಸ್ಗಳನ್ನು ನಿರ್ಮಿಸಲಾಗಿದೆ. ನೀರು ಸರಬರಾಜನ್ನು ಸಮರ್ಪಕಗೊಳಿಸಲು ಹೊರಗುತ್ತಿಗೆ ಆಧಾರದ ಮೇಲೆ 10 ಮಂದಿಯನ್ನು ನಿಯೋಜಿಸಿ ಕೊಳ್ಳಲಾಗಿದ್ದು, ವಾಟರ್ಮೆನ್ಗಳು ದಿನಪೂರ್ತಿ ಕೆಲಸದಲ್ಲೇ ನಿರತರಾಗಿರುತ್ತಾರೆ.
ಕಳೆದ 4 ವರ್ಷದಿಂದ ಕಂದಾಯ ನಿರೀಕ್ಷಕ ಹುದ್ದೆ ಖಾಲಿ ಇರುವದರಿಂದ ಕಂದಾಯ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದರ ನೇರ ಪರಿಣಾಮ ಇತರ ಅಭಿವೃದ್ಧಿ ಕಾರ್ಯಗಳ ಮೇಲಾಗುತ್ತಿದೆ.
ಜಿಲ್ಲೆಯ ಇತರ ಪ.ಪಂ.ಗಳಿಗೆ ಹೋಲಿಸಿದರೆ ಅತೀ ಹೆಚ್ಚು ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪಂಚಾಯಿತಿ ಎಂಬ ಹೆಗ್ಗಳಿಕೆ ಇದ್ದರೂ ಆದಾಯ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ.
ಪ.ಪಂ. ವಾಣಿಜ್ಯ ಮಳಿಗೆಗಳಿಂದ ಪಂಚಾಯಿತಿಗೆ 31 ಲಕ್ಷ ವಾರ್ಷಿಕ ಬೇಡಿಕೆಯಿದ್ದು, ಕಳೆದ 2016-17ರಲ್ಲಿ 24ಲಕ್ಷ, 2017-18ರಲ್ಲಿ 31.81ಲಕ್ಷ ಸೇರಿದಂತೆ 2018-19ರ ಮಾರ್ಚ್ ವರೆಗೆ 55.82 ಲಕ್ಷ ವಸೂಲಾತಿಗೆ ಬಾಕಿ ಇದೆ. ಪ್ರಸಕ್ತ ಸಾಲಿನಲ್ಲಿ 19.75 ಲಕ್ಷ ವಸೂಲಾತಿಯ ಮೂಲಕ ಈವರೆಗೆ ಶೇ. 34 ರಷ್ಟು ಮಾತ್ರ ಸಾಧನೆಯಾಗಿದೆ.
ನೀರಿನ ಕಂದಾಯ ವಸೂಲಾತಿ ಯಲ್ಲೂ ಪಂಚಾಯಿತಿ ಗಣನೀಯ ಸಾಧನೆ ಮಾಡಿಲ್ಲ. 23 ಲಕ್ಷ ಕಂದಾಯ ವಸೂಲಿಯ ಬೇಡಿಕೆಯಲ್ಲಿ 10.50 ಲಕ್ಷ ಮಾತ್ರ ವಸೂಲಾತಿಯಾಗಿದ್ದು, ಶೇ.32ರಷ್ಟು ಸಾಧನೆಯಾಗಿದೆ. ಮನೆ ಕಂದಾಯದ 47 ಲಕ್ಷ ಬೇಡಿಕೆಯಲ್ಲಿ 38ಲಕ್ಷ ವಸೂಲಾತಿ ಮಾಡುವ ಮೂಲಕ ಶೇ. 78 ಸಾಧನೆಯಾಗಿದೆ. ವಿವಿಧ ದಾಖಲಾತಿಗಳಿಗೆ ಪಂಚಾಯಿತಿಗೆ ಆಗಮಿಸುವ ಸಂದರ್ಭ ಕಂದಾಯ ಪಾವತಿ ಕಡ್ಡಾಯ ಎಂದು ವಸೂಲಾತಿ ಮಾಡಿದ್ದರಿಂದ ಈ ಮಟ್ಟಿಗಿನ ಸಾಧನೆಯಾಗಿದೆ.
ಒಟ್ಟಾರೆ ಪಟ್ಟಣ ಪಂಚಾಯಿತಿ ಯಲ್ಲಿ 17ಕ್ಕೂ ಅಧಿಕ ಹುದ್ದೆಗಳು ನಿಯೋಜನೆಗೆ ಉಳಿದಿರುವ ಹಿನ್ನೆಲೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯ ವಾಗುತ್ತಿಲ್ಲ. ಇರುವ ಸಿಬ್ಬಂದಿಗಳಿಗೇ ಹೆಚ್ಚುವರಿ ಕೆಲಸ ವಹಿಸುತ್ತಿ ರುವದರಿಂದ ಪರಿಣಾಮಕಾರಿ ಕೆಲಸಗಳಾಗುತ್ತಿಲ್ಲ. ಕಂದಾಯ ವಸೂಲಾತಿಯೂ ವೇಗ ಪಡೆದುಕೊಳ್ಳುತ್ತಿಲ್ಲ.
ಇದೀಗ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಪ.ಪಂ. ಆಡಳಿತ ಸ್ಥಳಾಂತರಗೊಂಡಿದೆ. ನೂತನ ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆಯೂ ನಡೆದಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ, ಬಾಕಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಕಂದಾಯ ನಿರೀಕ್ಷಕ ಹಾಗೂ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸುವ ಕಾರ್ಯ ತುರ್ತು ಆಗಬೇಕಿದೆ.