ಸೋಮವಾರಪೇಟೆ, ಡಿ. 25: ಇಲ್ಲಿನ ಮಾರುಕಟ್ಟೆ ಆವರಣ, ಮಾನಸ ಹಾಲ್ ಹಿಂಭಾಗದ ಗದ್ದೆ, ಹಾನಗಲ್ಲು ಶೆಟ್ಟಳ್ಳಿಯ ಕಾಫಿ ತೋಟಗಳಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಆಟಕ್ಕೆ ತಡೆಹಾಕಿರುವ ಠಾಣಾಧಿಕಾರಿ ಶಿವಶಂಕರ್ ಅವರು, ಇದೀಗ ಕಳೆದ ಅನೇಕ ಸಮಯಗಳಿಂದ ನಡೆಯುತ್ತಿದ್ದ ಕರ್ಕಳ್ಳಿ ಬಾಣೆಯ ಇಸ್ಪೀಟ್ ಅಡ್ಡೆಯ ಮೇಲೆ ಧಾಳಿ ನಡೆಸಿದ್ದು, 5 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕರ್ಕಳ್ಳಿ ಬಾಣೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಹಾನಗಲ್ಲು ಗ್ರಾಮದ ಶೇಖರ್, ಸೋಮವಾರಪೇಟೆಯ ಬಿ.ಎಂ. ಶಾಂತಕುಮಾರ್ ಅವರುಗಳನ್ನು ಬಂಧಿಸಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 20,850 ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟದಲ್ಲಿ ನಿರತರಾಗಿದ್ದ ಕರ್ಕಳ್ಳಿ ಬಾಣೆಯ ರಾಘವೇಂದ್ರ, ಬಜೆಗುಂಡಿಯ ಅಪ್ಪಣ್ಣಿ, ಸೋಮವಾರಪೇಟೆಯ ಜಗ್ಗ ಅವರುಗಳು ಪೊಲೀಸರನ್ನು ಕಂಡೊಡನೆ ಓಡಿ ಹೋಗಿದ್ದು, ಒಟ್ಟು 5 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್, ಶಂಕರ, ಕುಮಾರ್ ಮತ್ತು ಮಂಜುನಾಥ್ ಅವರುಗಳು ಭಾಗವಹಿಸಿದ್ದರು.