ಸೋಮವಾರಪೇಟೆ, ಡಿ. 11: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿರ್ವಾಣ ದಿನದ ಅಂಗವಾಗಿ ತಾ. 22 ಮತ್ತು 23 ರಂದು ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ದಲಿತ ಮಹಿಳಾ ಒಕ್ಕೂಟದ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವದೇ ಚಳುವಳಿಯಲ್ಲಿ ಮಹಿಳೆಯರು ಇಲ್ಲದೆ ಹೋದರೆ ಅದು ಅಪೂರ್ಣ ವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಮಾನತೆ, ಸಂವಿಧಾನ ಅರಿವು, ರಾಜಕಾರಣದ ತಿಳುವಳಿಕೆ, ನ್ಯಾಯಾಲಯದ ತೀರ್ಪುಗಳು ಸೇರಿದಂತೆ ಇತರ ಸಾಮಾಜಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಈ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ತಾ. 22 ರಂದು ಮಧ್ಯಾಹ್ನ 12.30ಕ್ಕೆ ನಡೆಯುವ ಶಿಬಿರವನ್ನು ಮಾನವ ಮಂಟಪದ ಅಧ್ಯಕ್ಷರಾದ ಇಂದಿರಾ ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ಇದೆ ಸಂದರ್ಭ ಹೆಚ್.ಎನ್. ನಾಗ ಮೋಹನ್‍ದಾಸ್ ಅವರ ಸಂವಿಧಾನದ ಓದು ಎಂಬ ಕೃತಿಯ 23ನೇ ಆವೃತ್ತಿಯನ್ನು ಮಾಜಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಬಿಡುಗಡೆಗೊಳಿಸಲಿದ್ದಾರೆ. ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭ ಕಟ್ಟಿಮನಿ ಅಧ್ಯಕ್ಷತೆ ವಹಿಸಿಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 2.30 ರಿಂದ ಸಂವಿಧಾನ ಮತ್ತು ಮಹಿಳೆ ವಿಚಾರ ಕುರಿತು ವಿಚಾರವಾದಿ ಡಾ. ಹೆಚ್.ಎಸ್. ಅನುಪಮ, ಉದ್ಯಮಶೀಲತೆ ಮತ್ತು ಮಹಿಳೆ ವಿಚಾರ ಕುರಿತು ಸಿ.ಜೆ. ಶ್ರೀನಿವಾಸನ್, ಮಹಿಳೆ ಹಾಗೂ ಮಾನವ ಹಕ್ಕುಗಳ ಕುರಿತು ಡಾ. ಅನುಸೂಯ ಕಾಂಬಳೆ ವಿಷಯ ಮಂಡಿಸಲಿದ್ದಾರೆ ಎಂದರು.

ತಾ. 23 ರಂದು ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಮಹಿಳಾ ಚಳುವಳಿಯಲ್ಲಿ ದಲಿತ ಮಹಿಳೆ ವಿಷಯ ಕುರಿತು ಡಾ. ಜಯದೇವಿ ಗಾಯಕವಾಡ, ಭಗವಾನ್ ಬುದ್ಧ ಮತ್ತು ಮಹಿಳೆ ಕುರಿತು, ಪೂಜ್ಯ ಬಂತೆ ಬೋದಿದತ್ತ ತೇರಾ, ಮಹಿಳೆ ಮತ್ತು ರಾಜಕಾರಣ ಕುರಿತು ಹುಲಿಕುಂಟೆ ಮೂರ್ತಿ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಮಧ್ಯಾಹ್ನ 12.30ಕ್ಕೆ ಮೈಸೂರು ವಿ.ವಿ.ಯ ಸಮಾಜ ಶಾಸ್ತ್ರಜ್ಞರಾದ ಪ್ರೊ. ಆರ್. ಇಂದಿರಾ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ ಸೇರಿದಂತೆ ಇತರರು ಭಾಗವಹಿಸಲಿ ದ್ದಾರೆ. ನಂತರ ಮೈಸೂರಿನ ಜನಾರ್ಧನ್ ಜನ್ನಿ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಪ್ರೇಮ ವಸಂತ್, ದಸಂಸ ಜಿಲ್ಲಾ ಸಂಚಾಲಕ ಎಂ.ಎಸ್. ವಿರೇಂದ್ರ, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಎಸ್. ಕಾಂತರಾಜ್, ತಾಲೂಕು ಸಂಚಾಲಕ ಬಿ.ಕೆ. ಯತೀಶ್, ಒಕ್ಕೂಟದ ಜಿಲ್ಲಾ ಸಂಚಾಲಕಿ ಬಿ.ಕೆ. ಮಂಜುಳ ಅವರುಗಳು ಉಪಸ್ಥಿತರಿದ್ದರು.