ಮಡಿಕೇರಿ, ಡಿ. 7: ರಾಷ್ಟ್ರದ ಏಕತೆ ಅಖಂಡತೆಗೆ ಬಲಿದಾನಗೈದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ನಗರದ ಯುದ್ಧ ಸ್ಮಾರಕದಲ್ಲಿ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ಯನ್ನು ಆಚರಿಸಲಾಯಿತು.

ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಯುದ್ಧ ಸ್ಮಾರಕದಲ್ಲಿ ಶುಕ್ರವಾರ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಡೆಯಿತು.

ಈ ಸಂದರ್ಭ ಹಾಜರಿದ್ದ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ (ನಿವೃತ್ತ), ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಸುಬ್ಬಯ್ಯ, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಏರ್ ಕಮಾಂಡರ್ ದೇವಯ್ಯ (ನಿವೃತ್ತ), ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕೆ.ಎ.ಆನಂದ್, ಕರ್ನಲ್ ಮುತ್ತಣ್ಣ, ಕಮಾಂಡರ್ ವಿ.ಎಂ.ನಾಯ್ಕ್, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲರಾದ ಆರ್.ಎಲ್.ಲಾಲ್, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರಾದ ನಂಜಪ್ಪ, ಎಂ.ಕೆ.ಅಚ್ಚಯ್ಯ, ಅವರು ಸೇರಿದಂತೆ ಹಲವು ಗಣ್ಯರು ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಅರ್ಪಿಸಿದರು.

ಕೊಡಗು ಜಿಲ್ಲಾ ಪೊಲೀಸ್ ದಳದಿಂದ ಇದೇ ಸಂದರ್ಭ ಬ್ಯೂಗಲ್ ರಿಟ್ರೀಚ್ ಮೂಲಕ ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಲಾಯಿತು.

ಆಚರಣೆಯ ಪ್ರಯುಕ್ತ ಹೊರತರಲಾದ ಧ್ವಜವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಎಂ.ಶೆಟ್ಟಿ ಅವರು ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ (ನಿವೃತ್ತ) ಅವರಿಗೆ ನೀಡುವ ಮೂಲಕ ಬಿಡುಗಡೆ ಮಾಡಲಾಯಿತು.