ವೀರಾಜಪೇಟೆ, ನ. 24: ವೀರಾಜಪೇಟೆ ಬಳಿಯ ಆರ್ಜಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳಿಗೆ ವಿದ್ಯುತ್ ದೀಪ, ಕುಡಿಯುವ ನೀರು, ಕಟ್ಟಡ ಮತ್ತು ವಾಣಿಜ್ಯ ಪರವಾನಗಿ, ಖಾತೆ ವರ್ಗಾವಣೆ ಹಾಗೂ ನಿರಾಪೇಕ್ಷಣಾ ಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲು ಗ್ರಾ.ಪಂ. ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಎಚ್.ಎನ್. ಗಾಯಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ. ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಆರ್ಜಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಎಂ.ಸತೀಶ್ ಕುಮಾರ್ ಅವರು ಕಳೆದ 2-3 ತಿಂಗಳಿಂದಲೂ ಸಭೆಯನ್ನು ಆಯೋಜಿಸಿಲ್ಲ ಎಂದು ಪಂಚಾಯಿತಿ ಅಧ್ಯಕ್ಷೆ ಮತ್ತು ಕೆಲವು ಸದಸ್ಯರುಗಳು ದೂರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ ಈ ಹಿನ್ನೆಲೆಯಲ್ಲಿ ಸಭೆಯ ಮುಂದಾಳತ್ವ ವಹಿಸಿ ಕೆಲವು ತಿಂಗಳುಗಳಿಂದ ಪಂಚಾಯಿತಿಯಲ್ಲೇ ಬಾಕಿ ಉಳಿದಿದ್ದ 95 ಅರ್ಜಿಗಳನ್ನು ಆದ್ಯತೆ ಮೇರೆ ವಿಲೇವಾರಿ ಮಾಡಿದರು. ನಂತರ ಪಂಚಾಯಿತಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಜಯಣ್ಣ, ಪಂಚಾಯಿತಿಯಲ್ಲಿ ವೈಯಕ್ತಿಕ ದ್ವೇಷವನ್ನು ಬಿಟ್ಟು ಅಧ್ಯಕ್ಷರು ಮತ್ತು ಸದಸ್ಯರುಗಳು ಹೊಂದಾಣಿಕೆಯಿಂದ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರೊಂದಿಗೆ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಹೇಳಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಅನ್ವರ್‍ಹುಲ್ ಹುದಾ ವಿದ್ಯಾ ಕೇಂದ್ರ ಹಾಗೂ ಪೆರುಂಬಾಡಿಯಲ್ಲಿರುವ ಕೂರ್ಗ್ ಗೇಟ್ ಹೊಟೇಲ್‍ಗೆ ಪಿ.ಡಿ.ಓ. ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ವಿರೋಧವಿದ್ದರೂ ನಿರಾಪಕ್ಷೇಣಾ ಪತ್ರ ನೀಡಿರುವದಲ್ಲದೆ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ, ಇವರ ವರ್ತನೆಯಿಂದ ಸದಸ್ಯರುಗಳು ಬೇಸತ್ತಿದ್ದಾರೆ ಎಂದು ದೂರಿದ್ದರು. ಪ್ರತಿಕ್ರಿಯಿಸಿದ ಜಯಣ್ಣ ಈ ಎರಡು ವಿಚಾರಗಳು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಇದ್ದು ಮುಂದಿನ ಆದೇಶ ಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಭೆಗೆ ತಿಳಿಸಿದರು.

ಸಭೆಗೆ ಅತಿಥಿಯಾಗಿ ಆಗಮಿಸಿದ್ದ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಯಾವದೇ ಅಭಿವೃದ್ಧಿ ಕೆಲಸಗಳಿಗೆ ಸಾಧ್ಯತೆ ಇಲ್ಲ. ಚುನಾವಣೆ ಸಂದರ್ಭ ಜನರಿಗೆ ನೀಡಿದ ಭರವಸೆಯನ್ನು ಪೂರೈಸು ವದು ಸದಸ್ಯರುಗಳ ಕರ್ತವ್ಯವಾಗಿದೆ. ಆದ್ದರಿಂದ ಸದಸ್ಯರುಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ತಾ.ಪಂ. ಸದಸ್ಯ ಬಿ.ಎಂ.ಗಣೇಶ್ ಮಾತನಾಡಿ ಸರಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಕುಡಿಯುವ ನೀರು, ರಸ್ತೆ, ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವದು ಪಂಚಾಯಿತಿ ಸದಸ್ಯರುಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಕೆ.ಎಂ. ಸತೀಶ್ ಕುಮಾರ್, ಸದಸ್ಯರು ಗಳಾದ ಟಿ.ಎನ್. ಲವಕುಮಾರ್, ಹೆಚ್.ಬಿ. ಉದಯಕುಮಾರ್, ಜಾಫರ್ ಸಾಧಿಕ್, ಟಿ.ಕೆ. ಬಶೀರ್, ಮಾತನಾಡಿದರು. ಮಹಿಳಾ ಸದಸ್ಯರುಗಳಾದ ಶ್ರೀಜಾ ಜಯನ್, ಹೆಚ್.ಬಿ. ಪಾರ್ವತಿ, ಎನ್.ಎನ್. ಫಾತಿಮಾ ಇತರರು ಉಪಸ್ಥಿತರಿದ್ದರು.