ಮಡಿಕೇರಿ, ನ. 22: ಪರಂಪ ರಾಗತವಾಗಿ ನಡೆದು ಬಂದಿರುವ ಕೊಡಗಿನ ವೈಶಿಷ್ಟ್ಯಪೂರ್ಣ ಹುತ್ತರಿ ಹಬ್ಬದ ಸಡಗರ ಮರೆಯಾಗಿ, ಅನ್ನದಾತ ರೈತನ ಮೊಗದಲ್ಲಿ ಈ ವರ್ಷ ದುಃಖದ ಛಾಯೆ ಮನೆ ಮಾಡಿದೆ. ಮಳೆಗಾಲದ ಪ್ರಾಕೃತಿಕ ವಿಕೋಪದ ಹೊಡೆತದ ತೀವ್ರತೆಯನ್ನು ಸುಗ್ಗಿ ಹಬ್ಬ ಹುತ್ತರಿಯ ಪರ್ವದಲ್ಲಿ ಎದುರುಗೊಳ್ಳುವಂತಾಗಿದೆ. ಹೀಗಾಗಿ ರೈತ ಕುಟುಂಬಗಳಿಗೆ ಹುತ್ತರಿಯ ಸಿಹಿಯೂಟ ಕಹಿ ಪ್ರಾಶನದೊಂದಿಗೆ ನುಂಗಲಾರದ ನೋವುಂಟು ಮಾಡಿದೆ.

ಕಾರ್ತಿಕ ಮಾಸದ ಹುಣ್ಣಿಮೆಯ ಶುಭ ರೋಹಿಣಿ ನಕ್ಷತ್ರದ ತುಂಬು ಬೆಳದಿಂಗಳ ರಾತ್ರಿಯಲ್ಲಿ ಪ್ರತಿ ಕುಟುಂಬದ ಮನೆ ಮುಂದಿನ ವಿಶಾಲ ಗದ್ದೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ತೆನೆ ಬಾಗಿ ಬೆಳೆದು ನಿಂತ ಭತ್ತದ ಕದಿರು ತೆಗೆಯುವದು ಸಂಪ್ರದಾಯವಾಗಿತ್ತು. ಹೊಸ ಬೆಳೆಯನ್ನು ಪೂಜಿಸಿ ಧನಲಕ್ಷ್ಮಿ - ಧಾನ್ಯ ಲಕ್ಷ್ಮಿಯ ಸಂಕೇತವಾಗಿ ಮನೆ ತುಂಬಿಸಿಕೊಳ್ಳುವದು ಸಹಜ ಸಂಭ್ರಮವಾಗಿತ್ತು.

ಆದರೆ ಈ ಬಾರಿ ಅನೇಕ ಕಡೆಗಳಲ್ಲಿ ಭತ್ತದ ಗದ್ದೆ ಮರೆಯಾಗಿ, ಮರಳುಗಾಡಿನಂತೆ ಭಾಸವಾಗುವ ದೃಶ್ಯ ಅಲ್ಲಲ್ಲಿ ಗೋಚರಿಸುತ್ತಿದೆ. ಮಡಿಕೇರಿ ನಗರಕ್ಕೆ ಹೊಂದಿಕೊಂಡಿರುವ ಬೆಟ್ಟಸಾಲು ತಪ್ಪಲುವಿನ ಮದೆ, ಜೋಡುಪಾಲ, ಹೆಬ್ಬೆಟ್ಟಗೇರಿ, ಗಾಳಿಬೀಡು, ಮೊಣ್ಣಂಗೇರಿ, ಕಾಲೂರು, ದೇವಸ್ತೂರು, ಮುಕ್ಕೋಡ್ಲು, ಇಗ್ಗೋಡ್ಲು, ಹಾಡಗೇರಿ, ಮೂವತ್ತೊಕ್ಲು ತನಕವೂ ಹಾಲೇರಿ ನಾಡಿನ ಬಹುಪಾಲು ಗ್ರಾಮಗಳಲ್ಲಿ ಭೂಕುಸಿತದ ಭೀಕರತೆಯಿಂದ ಭತ್ತದ ಗದ್ದೆಗಳು ಸರ್ವನಾಶಗೊಂಡಿರುವದು ಸಾಮಾನ್ಯ ದೃಶ್ಯ.

ಇನ್ನು ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ, ಗರ್ವಾಲೆ ವ್ಯಾಪ್ತಿಯಲ್ಲಿ ಗಮನಿಸಿದರೆ, ಈಗಷ್ಟೇ ಭತ್ತದ ಗದ್ದೆಗಳಲ್ಲಿ ಕದಿರು ಬಿಡುತ್ತಿರುವ ಹಸಿರುಗಟ್ಟಿದ ಪೈರಿನ ದೃಶ್ಯ ಎದುರಾಗಲಿದೆ. ಈ ಹಿಂದೆ ಹುತ್ತರಿಯ ವೇಳೆಗೆ ಭತ್ತದ ಗದ್ದೆಗಳಲ್ಲಿ ಕಣ್ಮನ ಸೆಳೆಯುತ್ತಿದ್ದ ಹೊಂಬಣ್ಣದ ಬೆಳೆಸಿರಿ ಇಂದು ಮರೆಯಾಗಿದೆ.

ಪಾಯಸಕ್ಕೂ ಅಕ್ಕಿ ಅಲಭ್ಯ : ಪರಿಣಾಮ ತಾ. 23 ರಂದು (ಇಂದು) ಕದಿರು ತೆಗೆಯುವ ಮೂಲಕ ವರ್ಷಂಪ್ರತಿಯಂತೆ ಆಚರಿಸುವ ಹುತ್ತರಿ ಸಂಭ್ರಮಕ್ಕೆ ಬೆಳೆ ಕೈಗೆಟುಕದ ಹಿನ್ನೆಲೆ ತೀವ್ರ ಆತಂಕ ಮನೆ ಮಾಡಿದೆ. ಗದ್ದೆಗಳಲ್ಲಿ ಕದಿರೊಡೆದು ಭತ್ತ ಅಕ್ಕಿಯ ಸ್ವರೂಪಕ್ಕೆ ಬಾರದಿರುವದರಿಂದ ‘ಹೊಸ ಅಕ್ಕಿ ಊಟ’ ಅಲಭ್ಯವಾಗಿದೆ. ಹೀಗಾಗಿ ಬಹುತೇಕ ಗ್ರಾಮೀಣ ರೈತರು ಇಂದು ಸಾಂಕೇತಿಕವಾಗಿ ಪರಂಪರಾಗತ ಹುತ್ತರಿ ಆಚರಿಸುವದು ಅನಿವಾರ್ಯವಿದ್ದರೂ, ಸಡಗರ - ಸಂಭ್ರಮ ಮರೆಯಾಗಿದೆ.

ಆತಂಕದ ನುಡಿ : ಮುಟ್ಲು ಗ್ರಾಮದ ಹಿರಿಯ ಉದಿಯಂಡ ಪೊನ್ನಪ್ಪ ಹೇಳುವಂತೆ, ತಮ್ಮ 80ರ ಇಳಿವಯಸ್ಸಿನಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಗ್ರಾಮದ ಮನೆ ಮನೆಗಳಲ್ಲಿ ಹುತ್ತರಿ ಸಂಭ್ರಮವಿರುತ್ತಿತ್ತು. ಈ ಬಾರಿ ಬೆಳೆ ಬೆಳೆಯದಿದ್ದರೂ, ಪೂರ್ವ ಕಾಲದ ಪದ್ಧತಿಯಂತೆ ಹಸಿ ಬೆಳೆಯನ್ನೇ ಕಟಾವು ಮಾಡಿ ಧಾನ್ಯ ರಹಿತ ಪೈರಿನಿಂದ ‘ನೆರೆ’ ಕಟ್ಟಿ ಪೂಜಿಸುವ ಅನಿವಾರ್ಯ ಸ್ಥಿತಿ ಎದುರಾಗಿದೆ ಯಂತೆ.

(ಮೊದಲ ಪುಟದಿಂದ) ಅಂತೂ ದೇವರ ಮೊರೆ ಹೊಕ್ಕು ಪರಂಪರಾಗತ ಹುತ್ತರಿ ಆಚರಣೆಯೊಂದಿಗೆ, ಕೋಲಾಟ, ಮಂದುಮಾನಿ ಉತ್ಸವ, ದುಡಿಪಾಟ್‍ನೊಂದಿಗೆ ವಾಡಿಕೆಯ ಎಲ್ಲಾ ಆಚರಣೆಗಳನ್ನು ಗ್ರಾಮಸ್ಥರು, ಊರು - ನಾಡು ಮಂದಿ ಆಚರಿಸುತ್ತಾರಂತೆ, ಭಗವಂತನ ಇಚ್ಚೆ ಹೀಗಿರಬೇಕಾದರೆ ನರ ಮಾನವರು ಏನು ಮಾಡುವದು ಸಾಧ್ಯವೆಂದು ಹಿರಿಯರು ಮರು ಪ್ರಶ್ನೆಯೊಂದಿಗೆ ಆತಂಕದ ನಿಟ್ಟುಸಿರು ಬಿಡುತ್ತಿದ್ದಾರೆ.

ಸೂರ್ಲಬ್ಬಿ ನಾಡಿನ ಬಹುತೇಕ ಮಂದಿ ಹುತ್ತರಿ ವೇಳೆ ಮುಂಗಾರು ಕದಿರು ತೆಗೆಯುವ ಬೆನ್ನಲ್ಲೇ ಗದ್ದೆಗಳಲ್ಲಿ ಕೊಯ್ಲು ಮುಗಿಸಿ, ಬೇಸಿಗೆ ಬೆಳೆಗೆ ಅಣಿಯಾಗುತ್ತಿದ್ದರು. ಆದರೆ ಈ ಬಾರಿ ಬಹುಶಃ ಇಲ್ಲಿ ಜನವರಿ ಅಂತ್ಯಕ್ಕೂ ಮುಂಗಾರು ಬೆಳೆ ಕೊಯ್ಲು ಮುಗಿಯುವದು ಸಂಶಯ ಎಂಬಂತಾಗಿದೆ.