ವೀರಾಜಪೇಟೆ, ನ. 22: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವ್ಯವಹಾರ ಚಾತುರ್ಯ ಸಂವಹನ, ಕೌಶಲ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಗೋಣಿಕೊಪ್ಪದ ಕಾವೇರಿ ಎಜುಕೇಷನ್ ಸೊಸ್ಯೆಟಿ ಇವರ ಸಹಯೋಗದಲ್ಲಿ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ತಾ. 28 ರಂದು ಜಿಲ್ಲಾಮಟ್ಟದ ಕಾವೇರಿ “ಕಾರ್ನಿವಲ್ ಫನ್ಫೇರ್-2018” ಎಂಬ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಚಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರಿಗೂ ಶಿಕ್ಷಣ ಎಂಬ ಧ್ಯೇಯವನ್ನು ಹೊಂದಿರುವ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಉತ್ತೆಜನ ನೀಡುತ್ತಾ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಪೂರ್ವಾಹ್ನ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾಲೇಜಿನ ಆವರಣದಲ್ಲಿ ನಡೆಯುವ ಈ ಉತ್ಸವದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಿಂಡಿ ತಿನಿಸುಗಳು, ಪಾನೀಯ ಹಾಗೂ ಆಕರ್ಷಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಸಂಗೀತ, ನೃತ್ಯ ಹಾಗೂ ವಿಜ್ಞಾನದ ಮಾದರಿಗಳ ಪ್ರದರ್ಶನ ವಿವಿಧ ರೀತಿಯ ವಿನೋಧಾತ್ಮಕ ಕ್ರೀಡಾ ಚಟುವಟಿಕೆಗಳು ಜರಗುತ್ತದೆ. ಉತ್ಸವದ ಆಕರ್ಷಣೆಯಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ವಿದ್ಯಾರ್ಥಿ ಸಲಹಾ ಸಮಿತಿ ಸಂಚಾಲಕಿ ಡಯಾನಾ, ಹಿರಿಯ ಉಪನ್ಯಾಸಕಿ ಎಂ.ಪಿ. ದಮಯಂತಿ, ಕೆ.ಪಿ. ಬೋಪಣ್ಣ, ಎಂ.ಎ. ನಾಚಪ್ಪ ಉಪಸ್ಥಿತರಿದ್ದರು.