ಸುಂಟಿಕೊಪ್ಪ, ನ. 22: ‘ಸ್ವಚ್ಛ ಶೌಚಾಲಯ ಸ್ವಚ್ಛ ಪರಿಸರ’ ಧ್ಯೇಯದಡಿ ಪ್ರತಿಯೊಬ್ಬರೂ ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಸಮಾಲೋಚನಾಕಾರ ಡಿ.ಡಿ. ಪೆಮ್ಮಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ, ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನದಡಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್ ವತಿಯಿಂದ ಏರ್ಪಡಿಸಿದ್ದ ಕ್ಲಸ್ಟರ್ ವಿಶ್ವಮಟ್ಟದ ಶೌಚಾಲಯ ದಿನ -2018 ರ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಶೌಚಾಲಯದ ಸ್ವಚ್ಛತೆ ಮತ್ತು ಬಳಕೆ ಕುರಿತು ಮಾತನಾಡಿದರು.

ಶಾಲೆ, ಮನೆ ಮತ್ತು ಸಮುದಾಯದ ಸ್ಥಳಗಳಲ್ಲಿ ಶೌಚಾಲಯದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಶಾಲೆಯಲ್ಲಿ ಮಕ್ಕಳು ತಾವು ಬಳಸಿದ ಶೌಚಾಲಯವನ್ನು ಸ್ವತಃ ತಾವೇ ಸ್ವಚ್ಛಗೊಳಿಸುವ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವದು ಸಂತಸ ಎಂದರು.

ಜಾಗೃತಿ ಆಂದೋಲನ ಕರಪತ್ರ ಬಿಡುಗಡೆಗೊಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕೆಂದರು.

ವಿಶ್ವ ಶೌಚಾಲಯ ದಿನದ ಮಹತ್ವ ಹಾಗೂ ಸ್ವಚ್ಛತೆ ಕುರಿತು ಮಾತನಾಡಿದ ಇಕೋ ಕ್ಲಬ್‍ನ ಉಸ್ತುವಾರಿ ಶಿಕ್ಷಕ, ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್ ಶೌಚಾಲಯ ಸ್ವಚ್ಛವಾಗಿದ್ದರೆ ಗ್ರಾಮ ಸ್ವಚ್ಛವಾಗಿದ್ದು ಆರೋಗ್ಯವಾಗಿರುತ್ತದೆ ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಜಾಥಾಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡುವ ಮುಲಕ ಸ್ವಚ್ಛ ಭಾರತ ನಿರ್ಮಾಣ ಸಂಕಲ್ಪ ಮಾಡಬೇಕೆಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಶೌಚಾಲಯ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಗ್ರಾ.ಪಂ. ಸದಸ್ಯರುಗಳಾದ ಕೆ.ಇ. ಕರೀಂ, ನಾಗರತ್ನ ಸುರೇಶ್, ಪಿಡಿಓ ಮೇದಪ್ಪ, ಕಾರ್ಯದರ್ಶಿ ಜಿ.ಆರ್. ಶ್ರೀಧರ್‍ಕುಮಾರ್, ಸಿಬ್ಬಂದಿ ಪುನೀತ್, ಶ್ರೀನಿವಾಸ್ ಮತ್ತಿತರರು ಇದ್ದರು. ನಂತರ ನಡೆದ ಜಾಗೃತಿ ಜಾಥಾದಲ್ಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಗ್ರಾಮ - ಸ್ವಚ್ಛ ಭಾರತ, ಬಯಲು ಶೌಚಮುಕ್ತ ಗ್ರಾಮ ನಮ್ಮ ಗುರಿ, ಶೌಚಾಲಯವೇ ಆರೋಗ್ಯಲಯ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಿತ್ಯಾದಿ ಪರಿಸರ ಘೋಷಣೆಗಳು ಶೌಚಾಲಯ ಸ್ವಚ್ಛತೆ ಕುರಿತ ಕರಪತ್ರಗಳನ್ನು ವಿತರಿಸಿದರು. ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಆಶುಭಾಷಣ ಮತ್ತು ಪರಿಸರ ಘೋಷಣೆಗಳ ಬರವಣಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.