ಮಡಿಕೇರಿ, ನ. 9: ಮೂರ್ನಾಡು ಸಮೀಪದ ಐಕೊಳ ತಾಜ್ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಜುಲ್ ಉಲಮಾ ಮಸೀದಿಯ ಉದ್ಘಾಟನಾ ಸಮಾರಂಭ ತಾ. 11 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಕೇರಳದ ಬಹು ಅಸ್ಸಯ್ಯಿದ್ ಸುಹೈಲ್ ಅಸ್ಸಕ್ವಾಫ್ ತಂಗಳ್ ಮಸೀದಿಯನ್ನು ಲೋಕಾರ್ಪಾಣೆಗೊಳಿಸಲಿದ್ದಾರೆ ಎಂದು ಮಸೀದಿ ಸಮಿತಿಯ ಕಾರ್ಯದರ್ಶಿ ಎಂ.ಜಿ. ಅಬ್ದುಲ್ ಲತೀಫ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಕೊಡಗು ನಾಯಿಬ್ ಖಾಝಿ ಕೆ.ಎ. ಮಹಮೂದ್ ಮುಸ್ಲಿಯಾರ್, ಕೊಡಗು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ. ಯೂಸುಫ್ ಹಾಜಿ, ಸಯ್ಯದ್ ಮಹಮ್ಮದ್ ಅಬ್ದುಲ್ ಹಕೀಮ್ ತ್ವಯ್ಯಿಬ್ ಅಲ್ ಜಮಲುಲ್ಲೈಲಿ ಕಡಲುಂಡಿ, ಕೊಂಡಂಗೇರಿ ಮುದರ್ರಿಸ್ ಉಮ್ಮರ್ ಸಖಾಫಿ, ಆಹಾರ ಮತ್ತು ಹಜ್ ಖಾತೆ ಸಚಿವ ಜಮೀರ್ ಅಹಮ್ಮದ್, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಸಾಧಾತುಗಳು, ಉಲಮಾ ಉಮರ, ಪಂಡಿತ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭ ಅತಿವೃಷ್ಟಿ ಹಾನಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಆಶ್ರಯ ನೀಡಲು ಭೂದಾನ ಮಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಹಾಗೂ ದರ್ಸ್ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿರುವ ದಕ್ಷಿಣ ಕನ್ನಡದ ಉಮ್ಮರ್ ಸಖಾಫಿ ಮತ್ತು ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರನ್ನು ಕೂಡ ಸನ್ಮಾನಿಸಲಾಗುವದು.

ಹಿನ್ನೆಲೆ ಗಾಯಕ ಅಬ್ದುಲ್ ಸಮದ್ ಅಮಾನಿ ಮತ್ತು ಸಂಗಡಿಗರಿಂದ ಬುರ್ದಾ ಆಲಾಪನೆ, ನಹತೇ ಶರೀಫ್ ಗಾಯಕ ಬೆಂಗಳೂರಿನ ಅಹ್ಮದ್‍ನಬೀಲ್ ಭರಕಾತಿ, ಮೊಯಿನುದ್ದೀನ್ ಖಾದ್ರಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಕೆ. ಅಬ್ದುಲ್ ಆಜೀಜ್, ಉಪಾಧ್ಯಕ್ಷ ಶಾದುಲಿ ಹಾಜಿ ಹಾಗೂ ಕೋಶಾಧಿಕಾರಿ ಪಿ.ಎ. ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.