ಮಡಿಕೇರಿ ಅ.25 - ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವೈಭವವು ಕೆಲವೇ ತಿಂಗಳಲ್ಲಿ ಮರುಕಳಿಸಲಿದ್ದು, ಈ ನಿಟ್ಟಿನಲ್ಲಿ ಆತಂಕ ಬೇಕಾಗಿಲ್ಲ. ಬದುಕನ್ನು ಛಲದಿಂದ ಎದುರಿಸುವ ಸ್ಥೈರ್ಯ ಎಲ್ಲರಲ್ಲಿಯೂ ಮೂಡಲಿ ಎಂದು ಕಲಾವಿದ ಮಂಡ್ಯ ರಮೇಶ್ ಮನವಿ ಮಾಡಿದ್ದಾರೆ.
ಭಾರತೀಯ ವಿದ್ಯಾಭವನದ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ಆಯೋಜಿತ ನಾಟಕ ಪ್ರದರ್ಶನದ ಸಂದರ್ಭ ಮಾತನಾಡಿದ ಮಂಡ್ಯರಮೇಶ್, ಕೊಡಗು ಜಿಲ್ಲೆ ನಿಸರ್ಗ ಸೌಂದರ್ಯದೊಂದಿಗೆ ಕಾಫಿ, ಕಿತ್ತಳೆ, ಜೇನಿನಂಥ ಅಪೂರ್ವತೆಗೆ ಉದಾಹರಣೆಯಾಗಿತ್ತು. ಈಗ ಸಂಭವಿಸಿರುವ ವಿಕೋಪ ಗ್ರಾಮೀಣ ಜನರನ್ನು ತಲ್ಲಣಗೊಳ್ಳುವಂತೆ ಮಾಡಿದ್ದರೂ ಯಾರೂ ಎದೆಗುಂದದೆ ಛಲದಿಂದ ಸವಾಲನ್ನು ಎದುರಿಸುವಂತಾಗಬೇಕು ಎಂದು ಕೋರಿದರು.
ಪ್ರಕೃತಿ ವಿಕೋಪ ಪೀಡಿತ ಜಪಾನ್, ಶ್ರೀಲಂಕಾ ದೇಶಗಳೂ ಕೂಡ ಕೆಲವೇ ತಿಂಗಳಲ್ಲಿ ಮತ್ತೆ ತಮ್ಮ ವೈಭವವನ್ನು ಮರಳಿ ಪಡೆದಿರುವದನ್ನು ತಾವೇ ಕಂಡದ್ದಾಗಿ ಉದಾಹರಣೆಯೊಂದಿಗೆ ವಿವರಿಸಿದ ಮಂಡ್ಯ ರಮೇಶ್ ಇದೇ ರೀತಿ ಕೊಡಗು ಕೂಡ ಜನರು, ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸಹಕಾರದಿಂದ ಮತ್ತೆ ಹಿಂದಿನಂತೆ ವೈಭವ ಮರಳಿ ಪಡೆಯುತ್ತದೆ. ಪ್ರಕೃತಿ ರಕ್ಷಣೆಯ ಪಾಠವನ್ನು ಮಾತ್ರ ಯಾರೂ ಮರೆಯಬಾರದೆಂದು ಮನವಿ ಮಾಡಿದರು. ಭವಿಷ್ಯದಲ್ಲಿ ಕೊಡಗು ನಾಡಿಗೆ ಯಾವದೇ ಸಮಸ್ಯೆಯಿಲ್ಲ ಎಂಬದನ್ನು ಯುವಪೀಳಿಗೆಗೆ ಮನದಟ್ಟು ಮಾಡಿಸಬೇಕು ಎಂದೂ ಸಲಹೆ ನೀಡಿದ ಮಂಡ್ಯರಮೇಶ್, ಕಾಲೂರಿನಂಥ ವಿಕೋಪ ಸಂಭವಿಸಿದ ಗ್ರಾಮದ ಸಂತ್ರಸ್ತರಿಗೆ ಕೌಶಲ್ಯ ಮಾರ್ಗದರ್ಶನ ತರಬೇತಿ ನೀಡುತ್ತಿರುವದು ಶ್ಲಾಘನೀಯ ಎಂದು ಮಂಡ್ಯ ರಮೇಶ್ ಪ್ರಶಂಸಿಸಿದರು.
ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಡಾ. ಮನೋಹರ್ ಜಿ.ಪಾಟ್ಕರ್ ಹಾಜರಿದ್ದರು. ನಯನ ಕಶ್ಯಪ್ ನಿರೂಪಿಸಿದರು.