ಮಡಿಕೇರಿ, ಅ. 4: ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶ ಮಂಟಪಗಳಿಗೆ ಸರಕಾರದಿಂದ ಅನುದಾನ ಒದಗಿಸುವಲ್ಲಿ ದಸರಾ ಸಮಿತಿ ವಿಫಲವಾದಲ್ಲಿ ದಶ ಮಂಟಪ ಸಮಿತಿ ಮುಂದಿನ ದಿನಗಳಲ್ಲಿ ದಸರಾ ಸಮಿತಿಯಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯ ಆರ್ಭಟದಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ್ದರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನಾಹುತಗಳು ಉಂಟಾಗದಂತೆ ಮತ್ತು ಈಗ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವಾಗಿ ಈ ಬಾರಿಯೂ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.ಮೈಸೂರು ದಸರಾಕ್ಕೆ 25 ಕೋಟಿ ರೂ.ಗಳ ಅನುದಾನ ನೀಡುವ ರಾಜ್ಯ ಸರಕಾರ ಮಡಿಕೇರಿ ದಸರಾದ ಬಗ್ಗೆ ನಿರ್ಲಕ್ಷ್ಯ ತಾಳಿರುವದು ಸರಿಯಲ್ಲ. ಅಗತ್ಯ ಅನುದಾನ ಕೋರುವಲ್ಲಿ ದಸರಾ ಸಮಿತಿ ಕೂಡ ವಿಫಲವಾಗಿದೆ ಎಂದು ಆರೋಪಿಸಿದರು.ಪ್ರಸಕ್ತ ಸಾಲಿನ ದಸರಾ ಉತ್ಸವ ಸರಳ ರೀತಿಯಲ್ಲಿ ನಡೆಯಲಿದ್ದು, ವಿಜಯ ದಶಮಿಯಂದು ಯಾವದೇ ಪೈಪೋಟಿಗಳಿಗೆ ಅವಕಾಶವಿಲ್ಲದಂತೆ ಮಂಟಪಗಳ ಮೆರವಣಿಗೆ ಸಾಗಲಿದೆ. ಸರಕಾರದ ನೆರವಿಗೆ ಎದುರು ನೋಡುತ್ತಿರುವದಾಗಿ ತಿಳಿಸಿದ ರವಿಕುಮಾರ್ ಸಾರ್ವಜನಿಕರು ಕೂಡ ಸಮಿತಿಯ ಸದಸ್ಯರು ದೇಣಿಗೆ ಸಂಗ್ರಹಿಸುವಾಗ ಪ್ರೀತಿಯಿಂದ ಆರ್ಥಿಕ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಹೊರ ಬರುತ್ತೇವೆ: ದಶ ಮಂಟಪಗಳಿಗೆ ಸರಕಾರದಿಂದ ಅನುದಾನ ಒದಗಿಸುವಲ್ಲಿ ದಸರಾ ಸಮಿತಿ ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ದಸರಾ ಸಮಿತಿಯಿಂದ ಹೊರಬಂದು ದಶ ಮಂಟಪ ಸಮಿತಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಎಚ್ಚರಿಕೆ ನೀಡಿದರು.

ದಸರಾ ಸಮಿತಿ ಯಾವದೇ ಆಸಕ್ತಿ ತೋರದ ಹಿನ್ನೆಲೆಯಲ್ಲಿ ದಶಮಂಟಪ ಸಮಿತಿ ವತಿಯಿಂದ ಪ್ರತ್ಯೇಕವಾಗಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಡ ಹೇರುವದರೊಂದಿಗೆ ಜಿಲ್ಲಾಧಿಕಾರಿ ಗಳಿಗೂ ಮನವಿ ಸಲ್ಲಿಸಲು ತೀರ್ಮಾನಿಸಿದೆ. ಜನರಿಗಾಗಿ ನಡೆಯುವ ದಸರಾ ಉತ್ಸವಕ್ಕೆ ಜನರೇ ತಮ್ಮಿಂದಾದ ನೆರವು ನೀಡಬೇಕು ಎಂದು ಕೋರಿದರು.

ಈ ಬಾರಿ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ದಸರಾ ಉತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ತೀರ್ಮಾನ ಕೈಗೊಂಡಿದ್ದರೂ, ಸರಳವಾಗಿ ಮಂಟಪಗಳನ್ನು ತಯಾರಿಸುವದಕ್ಕೂ ಪ್ರತಿ ಮಂಟಪಕ್ಕೆ ಕನಿಷ್ಟ 5-7 ಲಕ್ಷ ರೂ. ವೆಚ್ಚವಾಗಲಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಇಷ್ಟೊಂದು ಮೊತ್ತವನ್ನು ಕ್ರೋಡೀಕರಿಸುವದು ಅಸಾಧ್ಯವಾಗಿರುವದರಿಂದ ಸರಕಾರದ ಅನುದಾನವಿಲ್ಲದೆ ದಸರಾ ಆಚರಣೆ ಕಷ್ಟ ಸಾಧ್ಯ ಎಂದು ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ಮಡಿಕೇರಿ ದಸರಾದ ಸಾಂಪ್ರದಾಯಿಕ ಆಚರಣೆಯಾದ ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಗೆ ಇನ್ನು ಕೇವಲ 4-5 ದಿನಗಳು ಮಾತ್ರ ಬಾಕಿ ಉಳಿದಿದ್ದರೂ, ಈ ಬಾರಿ ದಸರಾ ಸಮಿತಿಯಾಗಲಿ, ಸರಕಾರವಾಗಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅನುದಾನ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಕರಗಗಳ ನಗರ ಸಂಚಾರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಕೂಡ ನಗರಸಭೆ ಮಾಡಿಲ್ಲ. ಹದಗೆಟ್ಟ ರಸ್ತೆ ಮತ್ತು ಅಶುಚಿತ್ವದ ವಾತಾವರಣದಲ್ಲಿ ಕರಗಗಳ ಸಂಚಾರವಾಗಬೇಕೆ ಎಂದು ರವಿಕುಮಾರ್ ಪ್ರಶ್ನಿಸಿದರು.

ಸಮಿತಿಯ ಮಾಜಿ ಅಧ್ಯಕ್ಷ ಆರ್.ಬಿ. ರವಿ ಮಾತನಾಡಿ ಮಡಿಕೇರಿ ದಸರಾಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದ್ದು, ಇದನ್ನು ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲವೆಂದರು. ಮಹಾಮಳೆಯಿಂದ ಸಂತ್ರಸ್ತರಾದವರಿಗೆ ಸರಕಾರ ಹಾಗೂ ದಾನಿಗಳು ಪರಿಹಾರೋಪಾಯಗಳ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಆದರೆ ಪರೋಕ್ಷವಾಗಿ ಸಂತ್ರಸ್ತರಾಗಿರುವ ವರ್ತಕರು ಮತ್ತು ಚಾಲಕರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೆ ಆರ್ಥಿಕ ಚಟುವಟಿಕೆ ಚುರುಕಾಗಬೇಕಾದರೆ ದಸರಾ ಉತ್ಸವದಂತಹ ಆಚರಣೆ ನಡೆಯಲೇಬೇಕೆಂದರು. ಸುದ್ದಿಗೋಷ್ಠಿಯಲ್ಲಿ ದಶ ಮಂಟಪ ಸಮಿತಿ ಪದಾಧಿಕಾರಿಗಳಾದ ಕೆ.ಆರ್ ರಕ್ಷಿತ್, ಅರೆಯಂಡ ಪ್ರಸನ್ನ, ಸತೀಶ್ ಧರ್ಮಪ್ಪ ಹಾಗೂ ಟಿ.ಎಲ್.ವಿಶ್ವನಾಥ್ ಉಪಸ್ಥಿತರಿದ್ದರು.