ನಾಪೋಕ್ಲು, ಸೆ. 19: ಹವಾಮಾನ ಅಸಮತೋಲನದ ಪ್ರಕ್ರಿಯೆ ಯಿಂದಾಗಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಂತಹ ದುರಂತ ಸಂಭವಿಸಿದೆಯೇ ಹೊರತು ಇದಕ್ಕೆ ಮಾನವ ನಿರ್ಮಿತ ರೆಸಾರ್ಟ್, ಹೋಂಸ್ಟೇಗಳು ಕಾರಣವಲ್ಲವೆಂದು ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಟ್ಟಮುಡಿಯ ಮದರಸದಲ್ಲಿ ಆಶ್ರಯ ಪಡೆದಿರುವಂತಹ ನಿರಾಶ್ರಿತರಿಗೆ ಸರಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ನಿರಾಶ್ರಿತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಬಳಿಕ ಅವರ ಅಹವಾಲುಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ತಿಂಗಳು ಸಂಭವಿಸಿದ ಪ್ರಕೃತಿ ವಿಕೋಪ ಪ್ರಕೃತಿಯ ಅಸಮತೋಲನ ದಿಂದಾದ ಒಂದು ಸಹಜ ಪ್ರಕ್ರಿಯೆಯಾಗಿದೆ ಆದರೆ ಪ್ರಕೃತಿ ವಿಕೋಪಕ್ಕೆ ಮಾನವ ನಿರ್ಮಿತ ಕಾರಣವೆಂದು ಕೆಲವು ಪರಿಸರವಾದಿ ಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಟೀಕಿಸಿದರು.
ಕೇರಳದಲ್ಲುಂಟಾದ ಪ್ರಕೃತಿ ವಿಕೋಪ ಜಾಗತಿಕ ಹವಾಮಾನದಿಂದ ಉಂಟಾದ ವ್ಯತ್ಯಾಸವೇ ಕಾರಣವೆಂದು ಯುಎನ್ಒನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೊಡಗಿನಲ್ಲೂ ಹವಾಮಾನ ವೈಪರಿತ್ಯವೇ ಭೂಕುಸಿತ ಸಂಭವಿಸಿದೆಯೇ ಹೊರತು ಮಾನವ ನಿರ್ಮಿತದಿಂದ ಉಂಟಾದ ದುರಂತವಲ್ಲವೆಂದು ಎ.ಕೆ.ಸುಬ್ಬಯ್ಯ ಹೇಳಿದರು.
ಕೊಟ್ಟಮುಡಿ ಪರಿಹಾರ ಕೇಂದ್ರದಲ್ಲಿರುವ ಕುಟುಂಬಗಳಿಗೆ ನೀಡಲಾಗುತ್ತಿರುವ ಪುನವರ್ಸತಿ ಗುರುತಿನ ಕಾರ್ಡ್ನ್ನು ಈ ಕುಟುಂಬಗಳ ಮಕ್ಕಳಿಗೂ ನೀಡುವಂತಾಗಬೇಕು ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣ ಶುಲ್ಕ ಸೇರಿದಂತೆ ಅಗತ್ಯ ವಿನಾಯಿತಿ ಪಡೆಯಲು, ಸಹಕಾರಿಯಾಗಲಿದೆ ಎಂದು ನಿರಾಶ್ರಿತ ಕೇಂದ್ರದ ನೋಡಲ್ ಅಧಿಕಾರಿಗೆ ಎ.ಕೆ.ಸುಬ್ಬಯ್ಯ ತಿಳಿಸಿದರು.
ಇದೇ ಸಂದರ್ಭ ಕಾಂಗ್ರೆಸ್ ಮುಖಂಡ ಪಿ.ಸಿ. ಹಸೈನಾರ್ ಹಾಜಿ ಅವರು ಕೊಟ್ಟಮುಡಿ ಮದರಸ ಕೇಂದ್ರದಲ್ಲಿ ಆಶ್ರಯ ಪಡೆದಿರುವ 22 ಕುಟುಂಬಗಳಿಗೆ ತಲಾ ಎರಡು ಸಾವಿರದಂತೆ ಹಣವನ್ನು ವಿತರಿಸಿದರು. ಈ ಸಂದರ್ಭ ವಕೀಲರಾದ ಕುಂಞ ಅಬ್ದುಲ್ಲಾ, ಮೊಹಮ್ಮದ್ ಜೈಶ್, ನಿರಾಶ್ರಿತ ಕೇಂದ್ರದ ಉಸ್ತುವಾರಿ ಮಹಮ್ಮದ್ ಹನೀಫ್, ಕೊಟ್ಟಮುಡಿ ಜಮಾಅತ್ ಕಾರ್ಯದರ್ಶಿ ಹಸನ್, ಮದರಸ ಅಧ್ಯಾಪಕರು ಮತ್ತೀತರರು ಹಾಜರಿದ್ದರು. - ದುಗ್ಗಳ ಸದಾನಂದ