ಕೂಡಿಗೆ, ಸೆ. 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಯಲ್ಲಿರುವ ಆದಿವಾಸಿಗಳ ಪುನ ರ್ವಸತಿ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಕಾಮಗಾರಿ ಸಾಗುತ್ತಿದೆ.

552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂರಾಗದೆ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಕಳೆದ ತಿಂಗಳಿನಿಂದ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಗೋಡೆ ಕಟ್ಟುವ ಕಾಮಗಾರಿಯ ಮೂಲಕ ಪ್ರಾರಂಭಗೊಂಡು ಮನೆಗಳಿಗೆ ಕಿಟಕಿ, ಬಾಗಿಲು, ಮೇಲ್ಚಾವಣಿ, ವಿದ್ಯುತ್, ನೆಲಕ್ಕೆ ಟೈಲ್ಸ್ ಹಾಕುವ ಮೂಲಕ 300 ಕ್ಕು ಹೆಚ್ಚು ಮನೆಗಳ ಕಾಮಗಾರಿ ಸಂಪೂರ್ಣಗೊಂಡಿದೆ.

ಸರ್ಕಾರದ ಆದೇಶವಿದ್ದರೂ ಕಾಮಗಾರಿ ನಡೆಸಲು ಅನುಮೋದನೆ ಇನ್ನೂ ಕುಂಠಿತಗೊಂಡೇ ಸಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಸರ್ಕಾರ ಆದೇಶಿಸಿದ್ದ ರೂ. 3.5 ಲಕ್ಷದಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಈಗಿನ ಕಾಮಗಾರಿ ಅನುಮೋದನೆಯು ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿರುವದು ರೂ. 4.70 ಲಕ್ಷ ಆಗಿರುತ್ತದೆ. ಇದರಲ್ಲಿ ಜಿಎಸ್‍ಟಿಯೂ ಸೇರಿರುತ್ತದೆ. ಕಾಮಗಾರಿಯ ಅನುಮೋದನೆಯು ಕುಂಠಿತ ವಾಗಿರುವದರಿಂದ ಸರ್ಕಾರದಿಂದ ಹಂತ ಹಂತವಾಗಿ ಬರಬೇಕಿದ್ದ ಹಣ ಸಮರ್ಪಕವಾಗಿ ಬರದಿರುವದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ದಿಡ್ಡಳ್ಳಿಯಿಂದ ನಿರಾಶ್ರಿತರನ್ನು ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಕೇಂದ್ರಕ್ಕೆ ಕರೆತಂದು ತಾತ್ಕಾಲಿಕ ಶೆಡ್ ನಿರ್ಮಿಸಿ, ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಅದರಂತೆ ನಿರ್ಮಿತಿ ಕೇಂದ್ರದವರಿಗೆ ಗುತ್ತಿಗೆಯ ಆದಾರದ ಮೇಲೆ ಕಾಮಗಾರಿಯನ್ನು ವಹಿಸಲಾಗಿ, ಕಾಮಗಾರಿಯನ್ನು ಶೇ. 75 ರಷ್ಟು ಪೂರ್ಣಗೊಳಿಸುವ ಜೊತೆಗೆ 300 ಮನೆಗಳನ್ನು ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಹಸ್ತಾಂತರಿಸಲು ಸಿದ್ಧತೆ ಮಾಡಿರುತ್ತಾರೆ. ಆದರೆ, ಪುನರ್ವಸತಿ ಕೇಂದ್ರಕ್ಕೆ ಇನ್ನೂ ಸಮರ್ಪಕವಾದ ರಸ್ತೆ, ವಿದ್ಯುತ್ ಅಳವಡಿಕೆ, ಒಳಚರಂಡಿ ವ್ಯವಸ್ಥೆಗಳ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಟೆಂಡರ್ ಪ್ರಕ್ರಿಯೆಯೇ ಪ್ರಾರಂಭವಾಗಿಲ್ಲ ಎಂಬದು ಸ್ಥಳೀಯ ನಿವಾಸಿಗಳ ಆರೋಪ. ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯವರು ತುರ್ತಾಗಿ ಸಿದ್ಧಗೊಂಡಿರುವ ಮನೆಗಳನ್ನು ಹಸ್ತಾಂತರಿಸುವ ಹಾಗೂ ಅನು ಮೋದನೆ ಕಾರ್ಯ ಚಟುವಟಿಕೆಯಲ್ಲಿ ತಲ್ಲೀನರಾಗಬೇಕು ಎಂದು ಆಗ್ರಹಿಸಿದ್ದಾರೆ.