ಕುಶಾಲನಗರ, ಸೆ 18: ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 27 ತಿಂಗಳ ತನ್ನ ಅಧಿಕಾರ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬಹುತೇಕ ಯಶಸ್ಸು ಕಂಡಿದೆ ಎಂದು ಕುಶಾಲನಗರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಎ.ಎಂ.ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ವರ್ಗಾವಣೆ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿ, ಪಟ್ಟಣ ವ್ಯಾಪ್ತಿಯಲ್ಲಿ 23 ಕಿಮೀ ರಸ್ತೆ ಅಭಿವೃದ್ಧಿ ಮತ್ತು 6 ಕಿಮೀ ಚರಂಡಿ ವ್ಯವಸ್ಥೆಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಪರಿಶಿಷ್ಟ ಪಂಗಡದ ಜನರಿಗೆ 169 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು 75 ಮನೆಗಳು ಪೂರ್ಣಗೊಂಡಿವೆ. ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಕಾರ್ಯಸೂಚಿ ಹಮ್ಮಿಕೊಳ್ಳಲಾಗಿದ್ದು ಮುಂದಿನ 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನೆನೆಗುದಿಗೆ ಬಿದ್ದಿದ್ದ ಗುಂಡುರಾವ್ ಬಡಾವಣೆ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಸಲಾಗಿದ್ದು ಮುಂದಿನ 3 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಾರುಕಟ್ಟೆಗೆ ಕಾಯಕಲ್ಪ ಕಲ್ಪಿಸಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೃಹತ್ ವಾಣಿಜ್ಯ ಸಂಕೀರ್ಣ ಕಾಮಗಾರಿಗೆ ಚಾಲನೆ ನೀಡಲು ಕೆಲವು ಸ್ವಾರ್ಥ ಸಾಧಕರಿಂದ ಅಡ್ಡಿ ಉಂಟಾಗಿದೆ ಎಂದರು.

ಸ್ವಚ್ಛ ಕುಶಾಲನಗರ ನಿರ್ಮಾಣ ಹಿನ್ನೆಲೆಯಲ್ಲಿ ಶೇ.90 ರಷ್ಟು ಸಾಧನೆ ಮಾಡಲಾಗಿದ್ದು 3780 ಮನೆಗಳಿಂದ ದಿನನಿತ್ಯ ಕಸ ಸಂಗ್ರಹ ಮಾಡಲಾಗುತ್ತಿದೆ. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವದರೊಂದಿಗೆ ಭುವನಗಿರಿಯಲ್ಲಿ ನಿರ್ಮಾಣಗೊಂಡಿರುವ ಕಸ ವಿಲೇವಾರಿ ಕೇಂದ್ರಕ್ಕೆ ಪಟ್ಟಣದ ಕಸ ಸಾಗಿಸಲಾಗುತ್ತಿದೆ. ಸ್ವಚ್ಛ ಕಾವೇರಿ ಕಾರ್ಯಕ್ರಮದಡಿ ನದಿ ಮಲಿನ ತಪ್ಪಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ಸರಕಾರದ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮಿಸಲಾಗಿದ್ದು ಒಟ್ಟು 34 ಪ್ರಕರಣಗಳಲ್ಲಿ 30 ಪ್ರಕರಣಗಳು ಪಂಚಾಯ್ತಿ ಪರವಾಗಿ ತೀರ್ಪು ಹೊರಬಿದ್ದಿದೆ ಎಂದು ಮಾಹಿತಿ ನೀಡಿದರು. ಅಕ್ರಮ ಬಡಾವಣೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ಮೂಲಭೂತ ಸೌಕರ್ಯ ಒದಗಿಸದಿರುವ ಬಡಾವಣೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನದಿ ತಟಗಳ ಬದಿಯಲ್ಲಿ ನಿರ್ಮಾಣಗೊಂಡ ನೂತನ ಬಡಾವಣೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆದಿದೆ ಎಂದಿದ್ದಾರೆ.

ಕುಶಾಲನಗರ ತಾವರೆಕೆರೆ ವ್ಯಾಪ್ತಿಯಲ್ಲಿ ಮಾತ್ರ ತನ್ನ ಅಧಿಕಾರ ಅವಧಿಯಲ್ಲಿ ಕೆಲವು ತಾಂತ್ರಿಕ ಲೋಪದಿಂದ ನಿಯಮಬಾಹಿರ ರಸ್ತೆ ಕಾಮಗಾರಿಯೊಂದು ನಡೆದಿದ್ದು ಇದರ ತೆರವು ಕಾರ್ಯ ಜಿಲ್ಲಾಡಳಿತದಿಂದ ನಡೆದಿರುವದಾಗಿ ತಿಳಿಸಿದರು.

ಕಾನೂನು ವ್ಯಾಪ್ತಿಗೆ ಒಳಪಡದ ಕೆಲಸ ಕಾರ್ಯಗಳನ್ನು ಮಾಡದಿರುವ ಸಂದರ್ಭ ನಿರ್ದಿಷ್ಟ ಮಾನದಂಡ ಅನುಸರಿಸಿದ ಕಾರಣ ಕೆಲವರು ವೈಯಕ್ತಿಕವಾಗಿ ತನ್ನ ಮೇಲೆ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿರುವದು ಕಂಡುಬಂದಿದೆ. ಪಟ್ಟಣದಲ್ಲಿ ವಾಹನಗಳನ್ನು ಸ್ವಚ್ಛಗೊಳಿಸುವ ಸರ್ವೀಸ್ ಸ್ಟೇಷನ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ನಿಯಮದಲ್ಲಿ ಅಡ್ಡಿಯುಂಟಾಗಿದ್ದು ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ ಸಂದರ್ಭ ಹಳೆಯ ಕಟ್ಟಡಗಳ ತೆರವು ಕಾರ್ಯ ಸಂದರ್ಭ ಕೆಲವರು ತನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸುತ್ತಿರುವದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕೆಲವರು ಮಾಧ್ಯಮದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು ಕಾನೂನಿನನ್ವಯ ಕ್ರಮ ಕೈಗೊಳ್ಳುವದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.