ಸೋಮವಾರಪೇಟೆ, ಸೆ. 15: ರಸ್ತೆಯ ಬದಿಯಲ್ಲಿ ನಿಲುಗಡೆಯಾಗಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಪಟ್ಟಣದ ಆನೆಕೆರೆ ಬಳಿ ತಾ.12ರ ರಾತ್ರಿ ಸಂಭವಿಸಿದೆ.

ತಾಕೇರಿ ಗ್ರಾಮದ ಶಿವಕುಮಾರ್(45) ಎಂಬವರೇ ಸಾವನ್ನಪ್ಪಿದವರಾಗಿದ್ದು, ತಾ. 12 ರಂದು ರಾತ್ರಿ 11.30ರ ಸುಮಾರಿಗೆ ಪಟ್ಟಣದಿಂದ ಮಡಿಕೇರಿ ರಸ್ತೆ ಮೂಲಕ ತೆರಳುತ್ತಿದ್ದ ಸಂದರ್ಭ, ಆನೆಕೆರೆ ಬಳಿ ರಸ್ತೆಯ ಆಚೆ ಬದಿಯಲ್ಲಿ ನಿಲುಗಡೆಯಾಗಿದ್ದ ಕ್ರೇನ್‍ಗೆ ಬೈಕ್ ಡಿಕ್ಕಿಯಾಗಿದೆ.

ಪರಿಣಾಮ ಶಿವಕುಮಾರ್ ಅವರ ತಲೆ ಭಾಗಕ್ಕೆ ಗಂಭೀರ ಪ್ರಮಾಣದ ಪೆಟ್ಟಾಗಿದ್ದು, ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು 6 ವರ್ಷ ಪ್ರಾಯದ ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.