*ಸಿದ್ದಾಪುರ, ಸೆ. 11: ಕಣ್ಮುಂದೆ ಜರಿಯುತ್ತಿದ್ದ ಬೆಟ್ಟ, ಭೀಕರ ಜಲಪ್ರಳಯಕ್ಕೆ ಸಾಕ್ಷಿಯಾಗಿದ್ದ ಮಕ್ಕಂದೂರು ಗ್ರಾಮದ ನಿವಾಸಿ ಕುಂಬಗೌಡನ ರಾಮಪ್ಪ ಎಂಬವರ ಪತ್ನಿ ಗಂಗಮ್ಮ (84) ತಾ. 10 ರಂದು ಮೃತರಾದರು. ಗ್ರಾಮದಲ್ಲಿ ಜಲ ಪ್ರಳಯವಾಗುತ್ತಿದ್ದಾಗ ಪಾರ್ಶುವಾಯು ಪೀಡಿತರಾಗಿದ್ದ ವೃದ್ಧೆ ಗಂಗಮ್ಮರನ್ನು ಬಿಟ್ಟು ಎಲ್ಲರೂ ಪರಾರಿಯಾಗಿದ್ದರು. ಭಯಾನಕ ವ್ಯವಸ್ಥೆಯಲ್ಲಿ ಒಂಟಿಯಾಗಿದ್ದ ಗಂಗಮ್ಮರನ್ನು ಮಾರನೇ ದಿನ ಕುಂಬಗೌಡನ ಚಂದ್ರಾವತಿ ಮತ್ತು ಅವರ ಪುತ್ರ ಅನು ಮಾಚಯ್ಯ ಗಂಗಮ್ಮನನ್ನು ಉಪಚರಿಸಿ, ರಕ್ಷಿಸಿ ಸ್ಥಳಾಂತರಗೊಳಿಸಿದರು. ಭೂ ಜರಿತ ತೀವ್ರಗೊಂಡಿದ್ದ ಪರಿಣಾಮ ಚಂದ್ರಾವತಿ ಮನೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ದೇವಸ್ತೂರು, ಹೆಬ್ಬೆಟ್ಟಗೇರಿಯ ಸುಮಾರು 40 ಮಂದಿ ಯಾವದೇ ಸಂಪರ್ಕಕ್ಕೆ ಸಿಲುಕದೆ ನೆಲಸಿದ್ದರು. ನಂತರ ರಕ್ಷಣೆಗೆ ಬಂದ ಸೇನಾ ಯೋಧರು ಗಂಗಮ್ಮರನ್ನು ರಕ್ಷಿಸಿ ಮಡಿಕೇರಿ ವರೆಗೆ ಹೊತ್ತುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ತೀವ್ರ ಆಘಾತಕ್ಕೆ ಒಳಗಾಗಿದ್ದ ಗಂಗಮ್ಮ ಚೇತರಿಸಿಕೊಳ್ಳದೇ ಮಡಿಕೇರಿ ಆಸ್ಪತ್ರೆಯಲ್ಲಿ ಮೃತರಾದರು. -ಅಂಚೆಮನೆ ಸುಧಿ