ಮಡಿಕೇರಿ, ಸೆ. 9: ಪ್ರಕೃತಿ ವಿಕೋಪ ಮತ್ತು ಮಹಾ ಮಳೆಯಿಂದ ತತ್ತರಿಸಿದ್ದ ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಸಂಭವಿಸಿದ ಕಾಫಿ ಬೆಳೆಯ ಪ್ರಾಥಮಿಕ ನಷ್ಟದ ಮಾಹಿತಿಯನ್ನು ಈವರೆಗೆ ಸರಿಯಾಗಿ ಸಂಗ್ರಹಿಸದೇ ಕಾಫಿ ಮಂಡಳಿ ಅಧಿಕಾರಿಗಳು ಕಾಫಿ ಕೃಷಿಯನ್ನೇ ನಿರ್ಲಕ್ಷಿಸಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಆರೋಪಿಸಿದೆ.ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದೀಗ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಕರ್ನಾಟಕದ ಹಾಸನ, ಚಿಕ್ಕಮಗಳೂರಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯ ಸಮಗ್ರ ವಿವರ ನೀಡಲಾಗಿದೆ. ಮನೆಹಾನಿ, ಜೀವಹಾನಿ, ಜಾನುವಾರು ಪ್ರಾಣ ಹಾನಿ, ರಸ್ತೆ ದುರಸ್ತಿ, ಕಟ್ಟಡ ಹಾನಿ, ತೋಟಗಾರಿಕಾ ಬೆಳೆಗಳ ಹಾನಿ, ಕೃಷಿ ಫಸಲು ನಷ್ಟ ಸೇರಿದಂತೆ ಎಲ್ಲಾ ರೀತಿಯ ನಷ್ಟದ ಸಮಗ್ರ ಮಾಹಿತಿಯನ್ನು ಆಯಾಯ ಇಲಾಖೆಗಳಿಂದ ಪಡೆದು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ.ಆದರೆ, ಈ ರೀತಿಯ ನಷ್ಟದ ಮಾಹಿತಿಯಲ್ಲಿ ಕಾಫಿ ಕೃಷಿಗೆ ಉಂಟಾಗಿರುವ ನಷ್ಟದ ಮಾಹಿತಿಯೇ ಇಲ್ಲ ಎಂದು ಜಂಟಿ ಹೇಳಿಕೆಯಲ್ಲಿ ಗಂಭೀರ ಆರೋಪ ಮಾಡಿರುವ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜಯರಾಮ್, ಸಂಚಾಲಕ ಕೆ.ಕೆ. ವಿಶ್ವನಾಥ್, ಹೀಗಾಗಿ ಇನ್ನೂ ಸರ್ಕಾರಕ್ಕೆ ಕಾಫಿ ಕೃಷಿಗಾದ ನಷ್ಟದ ಪ್ರಾಥಮಿಕ ಅಂದಾಜೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಕಾಫಿ ತೋಟಗಳಿಗೆ ಉಂಟಾಗಿರುವ ನಷ್ಟ ಮತ್ತು ವಿಕೋಪ ಸಂಭವಿಸಿದ ಊರುಗಳಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಕೃಷಿಗೆ ಸಂಭವಿಸಿರುವ ನಷ್ಟದ ಅಂದಾಜನ್ನು ಈ ವೇಳೆಗಾಗಲೇ ಕಾಫಿ ಮಂಡಳಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಥಮ ಹಂತದ ನಷ್ಟದ ವರದಿಯಾಗಿ ಸಲ್ಲಿಸಬೇಕಾಗಿತ್ತು. ಈಗಾಗಲೇ ನಷ್ಟ ಸಂಭವಿಸಿ 1 ತಿಂಗಳಾಗುತ್ತಾ ಬಂದಿದ್ದರೂ ಕಾಫಿ ಮಂಡಳಿಯ ಅಧಿಕಾರಿಗಳು ಮಾತ್ರ ನಿದ್ದೆ ಬಿಟ್ಟಿಲ್ಲ. ಹೀಗಾಗಿ ತೋಟಗಾರಿಕೆ,
(ಮೊದಲ ಪುಟದಿಂದ) ಕೃಷಿ ಇಲಾಖೆಗಳಿಂದ ಆಯಾ ಇಲಾಖೆಯ ಬೆಳೆಗಳ ನಷ್ಟದ ಮಾಹಿತಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲ್ಪಟ್ಟಿದ್ದರೂ ಕಾಫಿ ಬೆಳೆಯ ನಷ್ಟದ ಅಂದಾಜು ಇನ್ನೂ ಸರ್ಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ಹೀಗಾಗಿ, ಕಾಫಿ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆ.ಕೆ. ವಿಶ್ವನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧಿತ ಕರ್ನಾಟಕ ಬೆಳೆಗಾರರ ಒಕ್ಕೂಟ ಈಗಾಗಲೇ ರಾಜ್ಯದ ಕಾಫಿ ಬೆಳೆಗಾರ ಜಿಲ್ಲೆಗಳ ಜನಪ್ರತಿನಿಧಿಗಳ ಗಮನ ಸೆಳೆದಿದ್ದು ಅವರಿಂದ ಈ ನಿಟ್ಟಿನಲ್ಲಿ ಸೂಕ್ತ ಸ್ಪಂದನ ಲಭಿಸಿದೆ ಎಂದು ಬಿ.ಎಸ್. ಜಯರಾಮ್, ಕೆ.ಕೆ. ವಿಶ್ವನಾಥ್ ತಿಳಿಸಿದ್ದಾರೆ.
ಕಾಫಿ ಮಂಡಳಿ ಅಧಿಕಾರಿ ವರ್ಗ ಇನ್ನಾದರೂ ನಿರ್ಲಕ್ಷ್ಯ ತೋರದೇ ಕಾಫಿ ಕೃಷಿಗೆ ಉಂಟಾಗಿರುವ ನಷ್ಟದ ಅಂದಾಜಿನ ಪ್ರಾಥಮಿಕ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ವಿಳಂಬರಹಿತವಾಗಿ ಸಲ್ಲಿಸುವಂತೆ ಜಂಟಿ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.