ಮಡಿಕೇರಿ, ಸೆ. 7: ಕರ್ನಾಟಕ ಜಾನಪದ ಅಕಾಡೆಮಿಯು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಜಾನಪದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವ ಸಲುವಾಗಿ 45 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಧ್ಯಯನ ಅವಧಿ 3 ತಿಂಗಳುಗಳಾಗಿರುತ್ತದೆ. ಬಿಡುಗಡೆ ದಾರಿಯಾಗಿ ತಮಟೆ, ಜನಪದರ ಬಾಯಲ್ಲಿ ಸಿಂಧೂರ ಲಕ್ಷ್ಮಣ, ಖಲಂದರರು ಒಂದು ಅಧ್ಯಯನ, ಜಾನಪದೀಯ ಹಾಗೂ ಆಧುನಿಕ ಮಹಿಳಾ ಪ್ರಜ್ಞೆಗಳ ಸಂಘರ್ಷ, ಜಾನಪದ ಸಾಹಿತ್ಯದಲ್ಲಿ ಸೌಹಾರ್ದತೆ, ಹಾವಾಡಿಗರು ಒಂದು ಅಧ್ಯಯನ, ಯುವಕರು ಮತ್ತು ಜಾನಪದ, ಡೋಹರರು ಒಂದು ಅಧ್ಯಯನ, ಸಮೂಹ ಮಾಧ್ಯಮದಲ್ಲಿ ಜಾನಪದ ನೆಲೆಗಳು ಮತ್ತು ಜಾನಪದದಲ್ಲಿ ಧರ್ಮ ವಿಷಯಗಳ ಬಗ್ಗೆ ಅಧ್ಯಯನ ಮಾಡುವಂತಹವರು ಅರ್ಜಿ ನಮೂನೆಯನ್ನು ಕರ್ನಾಟಕ ಜಾನಪದ ಅಕಾಡೆಮಿಯಿಂದ ಪಡೆದು ತಾ. 15 ರ ಸಂಜೆ 5 ಗಂಟೆ ಒಳಗೆ ಸಲ್ಲಿಸಲು ಅವಕಾಶವಿರುತ್ತದೆ. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ.

ಅಧ್ಯಯನ ವೇತನದ ಮೊತ್ತ ರೂ. 1 ಲಕ್ಷ, ಇದರಲ್ಲಿ ಅಧ್ಯಯನಕಾರರಿಗೆ ರೂ. 70 ಸಾವಿರ, ಮಾರ್ಗದರ್ಶಕರಿಗೆ ರೂ. 5 ಸಾವಿರ ಮತ್ತು ಪ್ರಕಟಣೆಗಾಗಿ ರೂ. 25 ಸಾವಿರ ಕಾಯ್ದಿರಿಸಲಾಗಿದೆ. ಆಯ್ಕೆಗೊಂಡವರು 150 ಪುಟಗಳ ಡಿಟಿಪಿ ಮಾಡಿದ ಹಸ್ತ ಪ್ರತಿಯನ್ನು ಹಾಗೂ ವಿಷಯಕ್ಕೆ ಸಂಬಂಧಿಸಿದ ವಿವರಗಳನ್ನು ಸಿಡಿಗೆ ಅಳವಡಿಸಿ ಅಕಾಡೆಮಿಗೆ ಒಪ್ಪಿಸಬೇಕು. ಅಭ್ಯರ್ಥಿಗಳನ್ನು ಸಲಹಾ ಸಮಿತಿಯ ಸಂದರ್ಶನದ ತೀರ್ಮಾನದಂತೆ ಆಯ್ಕೆ ಮಾಡಲಾಗುವದು.

ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್ ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ದೂ.22215509 ನ್ನು ಹಾಗೂ ಅಕಾಡೆಮಿಯ ಇ-ಮೇಲ್ ಡಿegisಣಡಿಚಿಡಿ.ರಿಚಿಟಿಚಿಠಿಚಿಜಚಿ@gmಚಿiಟ.ಛಿom ಮೂಲಕ ಅರ್ಜಿ ಪಡೆಯಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.